ಹೊಸದಿಗಂತ ವರದಿ, ಮಂಡ್ಯ/ಮಳವಳ್ಳಿ :
ಜೆಡಿಎಸ್ ಪಕ್ಷಕ್ಕೆ ಸೆಕ್ಯುಲರ್ ಪದವನ್ನು ಬಳಸುವ ಅರ್ಹತೆಯನ್ನೇ ಕಳೆದುಕೊಂಡಿದೆ. ಪಕ್ಷದಿಂದ ಆ ಪದವನ್ನು ಕೈಬಿಡಬೇಕು. ಜಾತ್ಯತೀತ ಎಂಬ ಪದವನ್ನು ಬಳಸುವ ನೈತಿಕತೆಯೇ ಜೆಡಿಎಸ್ಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್, ಬಿಜೆಪಿ ಈಗ ಒಂದಾಗಿವೆ. ಮುಂದಿನ ಜನ್ಮದಲ್ಲಿ ಹುಟ್ಟಿದರೆ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆಂದು ದೇವೇಗೌಡರು ಹೇಳಿದ್ದರು. ಈಗ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನ್ನು ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರಾ. ನೀವು ಜಾತ್ಯತೀತ ಎಂಬ ಪದ ಇಟ್ಟುಕೊಳ್ಳುವುದಕ್ಕೆ ಯಾವ ನೈತಿಕತೆ ಇದೆ. ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ ಎಂದು ಆಗ್ರಹಿಸಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೋಲಿಸಲು ಶ್ರಮಿಸಿದ್ದೆವು. ಅದಕ್ಕೆ 136 ಸ್ಥಾನಗಳಲ್ಲಿ ಗೆದ್ದು ಅಽಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಮತ್ತು ಜೆಡಿಎಸ್ ಡೋಂಗಿಗಳ ರೀತಿ ಹೇಳಿಕೆ ನೀಡುತ್ತಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಈ ಬಾರಿ ಕನಿಷ್ಠ 20 ಸ್ಥಾನ ಗೆದ್ದು ಲೋಕಸಭೆಗೆ ಕಳಿಸುತ್ತೇವೆ. ಉಪಕಾರ ಮಾಡಿದವರನ್ನು ಎಂದಿಗೂ ಜನರು ಮರೆಯುವುದಿಲ್ಲ. 155 ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ದೇವೇಗೌಡರು, ಕುಮಾರಸ್ವಾಮಿ ಈ ಅವಕಾಶ ಮಾಡಿಕೊಟ್ಟಿದ್ದರಾ. ಅದನ್ನು ಮಾಡಿಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ ಎನ್ನುವುದನ್ನು ಮರೆಯಬೇಡಿ ಎಂದರು.