ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಆಂಗ್ರಿ ಯಂಗ್ ಮ್ಯಾನ್ ರಾಜಶೇಖರ್ ದಂಪತಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನಾಂಪಲ್ಲಿಯ 17ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಾಯಿಸುಧಾ ಸಂಚಲನಾತ್ಮಕ ತೀರ್ಪು ನೀಡಿದ್ದಾರೆ.
ರಾಜಶೇಖರ್ ದಂಪತಿ ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಡ್ ಬ್ಯಾಂಕ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಿರಂಜೀವಿ ಬಾವ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ 2011ರಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದೆ. ಜೀವಿತಾ ಮತ್ತು ರಾಜಶೇಖರ್ ದಂಪತಿಗೆ ನಾಂಪಲ್ಲಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿದೆ.
ಏನಿದು ಘಟನೆ?
ಇನ್ನು ಪ್ರಕರಣದ ವಿವರಕ್ಕೆ ಹೋದರೆ.. 2011ರಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ಸಂಗ್ರಹಿಸಿದ ರಕ್ತವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಜೀವಿತಾ ಮತ್ತು ರಾಜಶೇಖರ್ ಮಾಧ್ಯಮದವರ ಮುಂದೆ ಆರೋಪ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ಮಾಪಕ ಅಲ್ಲು ಅರವಿಂದ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿರಂಜೀವಿ ಹೆಸರಿನಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳು ಮತ್ತು ಟ್ರಸ್ಟ್ಗಳ ಸೇವೆ ವಿರುದ್ಧ ಅಸತ್ಯ ಆರೋಪಗಳನ್ನು ಮಾಡಿದ್ದಾಗಿ ದಂಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ವೀಡಿಯೋ ಜತೆಗೆ ಮಾಧ್ಯಮಗಳಲ್ಲಿ ಬಂದ ಲೇಖನಗಳನ್ನೂ ಲಗತ್ತಿಸಿ ನ್ಯಾಯಾಲಯದ ಮುಂದೆ ಇಡಲಾಗಿದೆ. ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿತು. ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿತು.
ದಂಡ ಪಾವತಿಸಿದ ನಂತರ, ಈ ತೀರ್ಪಿನ ವಿರುದ್ಧ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಸಿಕ್ಕಿದ್ದು, ಇಬ್ಬರಿಗೂ 10ಜನರ ಶ್ಯೂರಿಟಿ ನೀಡಿದ್ದಕ್ಕೆ ನ್ಯಾಯಾಲಯವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶದೊಂದಿಗೆ ದಂಪತಿಗೆ ಜಾಮೀನು ನೀಡಿತು.