ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನಿಯರ್ ಎನ್ಟಿಆರ್ ಸದ್ಯ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆರ್ಆರ್ಆರ್ ಬಳಿಕ ಸಾಕಷ್ಟು ಗ್ಯಾಪ್ ತೆಗೆದುಕೊಂಡ ನಂತರ, ಎನ್ಟಿಆರ್ ತಮ್ಮ 30 ನೇ ಚಿತ್ರ ʻದೇವರʼ ಪ್ರಾರಂಭಿಸಿದರು. ಜಾನ್ವಿ ಕಪೂರ್ ನಾಯಕಿಯಾಗಿರುವ ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಕಲ್ಯಾಣ್ ರಾಮ್ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗಷ್ಟೇ ಮೇ 20ರಂದು ಎನ್ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಿದರು. ಅದೇ ದಿನ ಸಿಂಹಾದ್ರಿ ಸಿನಿಮಾ ರೀ ರಿಲೀಸ್ ಆಗಿತ್ತು. ರಾಜ್ಯಾದ್ಯಂತ ಹಲವು ಥಿಯೇಟರ್ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಥಿಯೇಟರ್ಗಳಲ್ಲಿ ನೂಕುನುಗ್ಗಲು ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಎನ್ ಟಿಆರ್ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಂಹಾದ್ರಿ ಸಿನಿಮಾವನ್ನು ಮಚಲಿಪಟ್ಟಣಂನ ಸಿರಿ ಕೃಷ್ಣ ಮತ್ತು ಸಿರಿ ವೆಂಕಟ್ ಥಿಯೇಟರ್ನಲ್ಲಿ ಎನ್ಟಿಆರ್ ಹುಟ್ಟುಹಬ್ಬದಂದು ಮರು ಬಿಡುಗಡೆ ಮಾಡಲಾಯಿತು. ಇದರಿಂದ ಅಭಿಮಾನಿಗಳು ಥಿಯೇಟರ್ನ ಹೊರಗೆ ಬ್ಯಾನರ್, ಪೋಸ್ಟರ್ಗಳನ್ನು ಕಟ್ಟಿಕೊಂಡು ಗಲಾಟೆ ನಡೆಸಿದರು. ಕೆಲವು ಅಭಿಮಾನಿಗಳು ಸಾರ್ವಜನಿಕವಾಗಿ ಬೇಟೆಯಾಡುವ ಮಾರಕಾಸ್ತ್ರಗಳು ಮತ್ತು ಚಾಕುಗಳನ್ನು ತಂದು ಎರಡು ಮೇಕೆಗಳನ್ನು ರಸ್ತೆಯಲ್ಲೇ ಕೊಂದರು ಮತ್ತು ಎನ್ಟಿಆರ್ ದೇವರ ಪೋಸ್ಟರ್ನಲ್ಲಿ ಅವುಗಳ ರಕ್ತವನ್ನು ಹಾಕಿದರು. ರಕ್ತ ಅಭಿಷೇಕ ಭಯಾನಕ ಸೃಷ್ಟಿಸಿತು. ಇವರಿಂದಾಗಿ ರಸ್ತೆಯಲ್ಲಿದ್ದ ಜನರು ತುಂಬಾ ತೊಂದರೆ ಅನುಭವಿಸಿದ್ದು, ಕೆಲ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಥಿಯೇಟರ್ಗೆ ಆಗಮಿಸಿ ಎನ್ಟಿಆರ್ ಅಭಿಮಾನಿಗಳನ್ನು ಬಂಧಿಸಿದ್ದಾರೆ.
ಅದೇ ದಿನ ವಿಜಯವಾಡ ಥಿಯೇಟರ್ ನಲ್ಲಿ ಎನ್ ಟಿಆರ್ ಅಭಿಮಾನಿಗಳು ಪಟಾಕಿ ಸಿಡಿಸಿದ್ದರು. ಥಿಯೇಟರ್ನ ಒಂದು ಭಾಗ ಬೆಂಕಿಗೆ ಆಹುತಿಯಾಗಿದೆ. ಲಂಡನ್ನಲ್ಲಿ ಕೂಡ ಥಿಯೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯಿಂದಾಗಿ ಪ್ರೇಕ್ಷಕರು ಭಯಭೀತರಾಗಿದ್ದಾರೆ. ಅನೇಕ ಎನ್ಟಿಆರ್ ಅಭಿಮಾನಿಗಳು ಈ ಘಟನೆಗಳನ್ನು ಟೀಕಿಸುತ್ತಿದ್ದಾರೆ. ವಾತ್ಸಲ್ಯ ಇರಬೇಕು ಆದರೆ ಜನರಿಗೆ ಹೆಚ್ಚು ತೊಂದರೆ ಆಗಬಾರದು ಎಂಬ ಕಮೆಂಟ್ ಗಳು ಬರುತ್ತಿವೆ.