ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನವಾಪಿ ಮಸೀದಿಯ ಸರ್ವೆ ನಡೆಸುವಂತೆ, ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ಸುರಕ್ಷತೆ ಹಾಗೂ ಕುಟುಂಬದ ಸದಸ್ಯರ ರಕ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರಕಾರ ಗ್ಯಾನವಾಪಿ ಮಸೀದಿ ಸುತ್ತಮುತ್ತಲ ಪ್ರದೇಶದಲ್ಲಿ ಸರ್ವೆ ನಡೆಸುವಂತೆ ಸರ್ವೆ ತಂಡಕ್ಕೆ ನ್ಯಾಯಾಲಯ ಸೂಚಿಸಿದೆ.
ಮೇ 7ರಂದು ಮಸೀದಿಯಲ್ಲಿ ನಡೆಸಿದ ಸಮೀಕ್ಷೆಯು ಹಿಂದೂ ದೇವಾಲಯದ ಹೆಗ್ಗುರುತುಗಳು ಮತ್ತು ಸ್ವಸ್ತಿಕಗಳನ್ನು ಬಹಿರಂಗಪಡಿಸಿತು. ಸರ್ವೆ ನಿಲ್ಲಿಸಬೇಕು ಎಂದು ಮಸೀದಿ ಆಡಳಿತಾಧಿಕಾರಿಗಳು ಸೂಚಿಸಿದ್ದರು. ಅದೇ ಸಮಯದಲ್ಲಿ, ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸದಸ್ಯರು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿ, ಪಕ್ಷಪಾತಿಯಾಗಿರುವ ಕಾರಣಕ್ಕಾಗಿ ನ್ಯಾಯಾಲಯ ನೇಮಿಸಿದ ಸರ್ವೆ ಕಮಿಷನರ್ ಅವರನ್ನು ವಜಾಗೊಳಿಸುವಂತೆ ಕೋರಿದ್ದಾರೆ.
ಸೋಮವಾರ (ಮೇ 11) ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿಕುಮಾರ್ ದಿವಾಕರ್ ನೇತೃತ್ವದ ಪೀಠವು ಅಧಿಕಾರಿಯನ್ನು ವಜಾಗೊಳಿಸಲು ನಿರಾಕರಿಸಿತು. ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ರವಿಕುಮಾರ್ ದಿವಾಕರ್ ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ, ನನ್ನ ಕುಟುಂಬ ಸದಸ್ಯರು ನನ್ನ ರಕ್ಷಣೆಯ ಬಗ್ಗೆ ಚಿಂತಿತರಾಗಿದ್ದಾರೆ.
ಈ ಸಿವಿಲ್ ಪ್ರಕರಣವನ್ನು ಅಸಾಮಾನ್ಯ ಪ್ರಕರಣವನ್ನಾಗಿ ಪರಿವರ್ತಿಸುವ ಮೂಲಕ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ನಾನು ಮನೆಯಿಂದ ಹೊರಗೆ ಬಂದರೆ, ನನ್ನ ಪತ್ನಿಗೆ ಭಯ ಶುರುವಾಗುತ್ತದೆ. ಪದೇ ಪದೇ ನನ್ನ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾಳೆ, ಎಂದು ನ್ಯಾಯಾಧೀಶ ರವಿ ದಿವಾಕರ್ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ನಾನು ಮಣಿಯುವುದಿಲ್ಲ ಗ್ಯಾನವಾಪಿ ಮಸೀದಿಯಲ್ಲಿ ಸರ್ವೆ ಕಾರ್ಯ ಮುಂದುವರಿಯಲಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.