ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಪಿಡಬ್ಲ್ಯೂಡಿ ಸಚಿವ ಮತ್ತು ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರನ್ನು ‘ಮಳೆಗಾಲದಲ್ಲಿ ಹೊರ ಬರುವ ಕಪ್ಪೆಯಂತೆ’ ಎಂದು ಟೀಕಿಸಿದ್ದಾರೆ.
ಮಂಡಿ ಕ್ಷೇತ್ರದಲ್ಲಿ (Mandi Constituency) ಮತಯಾಚನೆ ವೇಳೆ ಮಾತನಾಡಿರುವ ಅವರು , ಕಂಗನಾ ರಣಾವತ್ ಮಳೆಗಾಲದಲ್ಲಿ ಹೊರಬರುವ ಕಪ್ಪೆಯಿದ್ದಂತೆ, ಪ್ರಚಾರದ ನಂತರ ಮಾಯವಾಗ್ತಾರೆ. ಹಿಮಾಚಲ ಪ್ರದೇಶದ ವಾತಾವರಣವು ಹಿತಕರವಾಗಿರೋದ್ರಿಂದ ಈಗ ಪ್ರವಾಸಕ್ಕೆ ಬಂದಿದ್ದಾರೆ. ಶೀಘ್ರವೇ ಆವರು ಕಣ್ಮರೆಯಾಗ್ತಾರೆ ಎಂದು ಟೀಕಿಸಿದ್ದಾರೆ.
ಅಲ್ಲದೇ ಪ್ರಚಾರದ ಸಂದರ್ಭ ಕಂಗನಾ ಅವರು ಧರಿಸುವ ಬಟ್ಟೆಗಳು ಸಿನಿಮಾ ಶೂಟಿಂಗ್ಗೆ ಹೋಗುವಂತೆ ಇದೆ. ಅವರು ಜನಮನ ಗೆಲ್ಲೋದಕ್ಕಾಗಲಿ, ಜನರ ನೋವನ್ನ ಅರ್ಥಮಾಡಿಕೊಳ್ಳೋದಕ್ಕಾಗಲಿ ಸಾಧ್ಯವಿಲ್ಲ. ಹಿಮಾಚಲ ಪ್ರದೇಶದ (Himachal Pradesh) ಆಹ್ಲಾದಕರ ವಾತಾವರಣ ಆನಂದಿಸಲು ರಾಜ್ಯಕ್ಕೆ ಬಂದಿದ್ದಾರೆ, ಮೂರು ತಿಂಗಳ ನಂತರ ಶೀಘ್ರವೇ ಹಿಂದಿರುಗುತ್ತಾರೆ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್, ನಟಿ ಕಂಗನಾ ರಣಾವತ್ ಅವರಿಗೆ ಗೋಮಾಂಸ ಅಂದರೆ ಇಷ್ಟ. ಅವರೇ ಅದನ್ನು ಹೇಳಿಕೊಂಡಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಗನಾ ಆ ಮಾತಿಗೆ ತಿರುಗೇಟು ನೀಡಿದ್ದರು.
ಸದ್ಯ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಪ್ರತಿನಿತ್ಯ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಗುರುವಾರವೂ ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿದ್ದ ಕಂಗನಾ, ಅಲ್ಲಿನ ಪುರಾತನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಮತಯಾಚನೆ ಮಾಡಿದ್ದಾರೆ.