ಹೊಸದಿಗಂತ ವರದಿ, ಮಂಗಳೂರು:
ಗಾಯಕ ಸೋನು ನಿಗಮ್ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ವಿರುದ್ಧ ಸೋನು ನಿಗಮ್ ನೀಡಿದ ಒಂದೇ ಒಂದು ಹೇಳಿಕೆ ಭಾರೀ ವಿವಾದಕ್ಕೆ ಗುರಿಯಾಗಿದೆ. ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಧ್ವನಿಯೆತ್ತಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕಾಲೇಜುವೊಂದಕ್ಕೆ ಇತ್ತೀಚೆಗೆ ಸೋನು ನಿಗಮ್ ಬಂದಿದ್ದರು. ಈ ವೇಳೆ ಯುವಕನೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದನಂತೆ. ಆದರೆ ಇಷ್ಟು ಹೇಳಿದ್ದೇ ತಡ ಸೋನು ಹಾಡುತ್ತಿದ್ದ ಹಾಡನ್ನೇ ಅರ್ಧಕ್ಕೆ ನಿಲ್ಲಿಸಿ ‘ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್ನಲ್ಲಿ ದಾಳಿಯಾಗಿದ್ದು’ ಎಂದು ಹೇಳಿದ್ದಾರೆ. ಈ ಮೂಲಕ ಸೋನು ನಿಗಮ್ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಇನ್ನು ಈ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.
ಇದೀಗ ಕನ್ನಡವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದಂತೆ ಹೇಳಿಕೆ ನೀಡಿದ ಸಿಂಗರ್ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದೆ. ಇತ್ತ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಭಾರೀ ವಿವಾದ ಸೃಷ್ಟಿಯಾಗುತ್ತಿದ್ದಂತೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಈ ಬಗ್ಗೆ ಧ್ವನಿಯೆತ್ತಿದೆ.
ಇದೀಗ ಕರವೇ ರಾಜ್ಯಾಧ್ಯಕ್ಷ ನಾರಾಯಣ , ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ. ಸೋನು ನಿಗಮ್ ಅವರಿಂದ ಕನ್ನಡ ಹಾಡು ಹಾಡಿಸಬೇಡಿ. ನಮ್ಮಲ್ಲೇ ಎಷ್ಟೋ ಪ್ರತಿಭಾವಂತ ಕನ್ನಡ ಗಾಯಕರಿದ್ದಾರೆ. ಅಂಥವರಿಗೆ ಅವಕಾಶ ಕೊಡಿ. ಅದು ಬಿಟ್ಟು ಈ ರೀತಿ ದುರಾಭಿಮಾನ ತೋರಿಸುವ ಸೋನು ನಿಗಮ್ ಗೆ ಕನ್ನಡದಲ್ಲಿ ಹಾಡಲು ಅವಕಾಶ ಕೊಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.