ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ವಿಚಾರಕ್ಕೆ ಕೈಗೊಂಡಿರುವ ಬಂದ್ ಅವಶ್ಯಕತೆ ಇರಲಿಲ್ಲ, ಆದರೂ ಎಲ್ಲ ಕಡೆಯೂ ಶಾಂತಿಯುತವಾಗಿ ಹೋರಾಟ ನಡೆಯುತ್ತಿದೆ. ನಾವೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ಸಮಸ್ಯೆಗೆ ಬಂದ್ ಮಾಡುವ ಅಗತ್ಯ ಇರಲಿಲ್ಲ, ಮಧ್ಯಾಹ್ನ ಈ ಬಗ್ಗೆ ಮತ್ತೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಸಭೆಯಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ನಮ್ಮವರು ಇದುವರೆಗೂ ಯಾರೆಲ್ಲಾ ವಾದ ಮಂಡಿಸಿದ್ದಾರೋ ಅವರೆಲ್ಲರೂ ಇರಲಿದ್ದಾರೆ. ಇಂದು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ರಾಜ್ಯದ ಪರಿಸ್ಥಿತಿ ಬಗ್ಗೆ ಸಮಿತಿ ಮುಂದಿಡುತ್ತೇವೆ ಎಂದರು.
ಎಲ್ಲೆಡೆ ಶಾಂತಿಯುತ ಪ್ರತಿಭಟನೆಗೆ ಜನರು ಸಹಕರಿಸುತ್ತಿದ್ದಾರೆ, ಎಲ್ಲರಿಗೂ ಸಂಪೂರ್ಣ ರಕ್ಷಣೆ ನೀಡಿದ್ದೇವೆ. ಸುಪ್ರಿಂಕೋರ್ಟ್ನಿಂದ ಯಾವುದೇ ಒಪ್ಪಿಗೆ ಇಲ್ಲದಿರುವುದರಿಂದ ಬಂದ್ಗೆ ಕರೆ ನೀಡದಂತೆ ಸಂಸ್ಥೆಗಳಿಗೆ ಮನವಿ ಮಾಡಿದ್ದೆವು. ವಾಹನ ಸಂಚಾರ, ಅಂಗಡಿಗಳು ಎಲ್ಲಾ ತೆರೆದಿವೆ. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದ್ ನಡೆಯುತ್ತಿದೆ ಎಂದರು.