ಹೊಸದಿಗಂತ ವರದಿ ಗದಗ :
ಜಗತ್ತಿಗೆ ಮೊದಲ ಪಾರ್ಲಿಮೆಂಟ್ ಕೊಟ್ಟ ವ್ಯಕ್ತಿ ಬಸವಣ್ಣ, ಎಲ್ಲ ಜಾತಿ, ಭಾಷೆಯವರಿಗೆ ಸಾಮಾಜಿಕ ಸಮಾನತೆ ಕೊಟ್ಟಿದ್ದು ಬಸವಣ್ಣ, ಮಹಾರಾಷ್ಟ್ರದಲ್ಲಿ ಶಿವಾಜಿ ಸಾಂಸ್ಕೃತಿಕ ನಾಯಕ, ಪಶ್ಚಿಮ ಬಂಗಾಳದಲ್ಲಿ ಸ್ವಾಮಿ ವಿವೇಕಾನಂದ, ಪಂಜಾಬ್ನಲ್ಲಿ ಗುರುನಾನಕ ಅವರನ್ನು ಸಾಂಸ್ಕೃತಿಕ ಗುರು ಎಂದು ಒಪ್ಪಿಕೊಂಡಿದ್ದಾರೆ ಅದರಂತೆ ನಾಡಿಗೆ ಬಸವನಾಡು ಎಂದು ಹೆಸರಿಟ್ಟರೆ ಬಸವ ವಿಚಾರ ಇನ್ನಷ್ಟು ಜಗತ್ತಿಗೆ ಪ್ರಚಾರವಾಗುತ್ತೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಬಸವ ಜನ್ಮಭೂಮಿ ವಿಜಯಪುರಕ್ಕೆ ಬಸವೇಶ್ವರ ನಾಮಕರಣ ಪ್ರಕ್ರಿಯೆ ಶುರುವಾಗಿದೆ. ಬಸವತತ್ವ ಆಚರಣೆ ಮಾಡಿದಲ್ಲಿ ಕರ್ನಾಟಕ ಯಾವತ್ತೋ ಬಸವ ಕರ್ನಾಟಕವಾಗುತ್ತಿತ್ತು. ಆದರೆ, ಜನರಿಗೆ ಬಸವ ತತ್ವ ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಉತ್ತರ ಕರ್ನಾಟಕದ ಗಡಿ ಬಿಟ್ಟು ಬಸವಣ್ಣ ಅವರನ್ನು ಬೇರೆಡೆಗೆ ತೆಗೆದುಕೊಂಡು ಹೋಗಲಿಕ್ಕಾಗಿಲ್ಲ ಎಂದು ಶ್ರೀಗಳು ಹೇಳಿದರು.
ಇಂಗ್ಲೆಂಡ್ನಲ್ಲಿ ಬಸವ ಪ್ರತಿಮೆ ನಿರ್ಮಾಣವಾದ ನಂತರ ಜಾಗತಿಕ ಮಟ್ಟದಲ್ಲಿ ಅನುಭವ ಮಂಟಪ ಬಗ್ಗೆ ಚರ್ಚೆಯಾಯಿತು. ಬಸವಣ್ಣನವರಿಗೆ ಯಾವಾಗಲೋ ಆ ಗೌರವ ಸಿಗಬೇಕಿತ್ತು ಈಗಲಾದರೂ ರಾಜಕೀಯ ಪಕ್ಷಗಳು ಭೇದ-ಭಾವ ಮರೆತು ಮುನ್ನುಡಿ ಬರೆಯುವ ಕೆಲಸವಾಗಲಿ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.