ದಿಗಂತ ವರದಿ ಮೈಸೂರು:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ 38.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಪೇಪರ್ ಲೆಸ್ ಬಜೆಟ್ ಒಂದು ಕಡೆಯಾದರೆ, ಮತ್ತೊಂದೆಡೆ ಇದು ಪಾಪರ್ ಚೀಟಿ ಬಜೆಟ್. ಕೇವಲ ಒಂದಿಬ್ಬರು ಶ್ರೀಮಂತ ಉದ್ಯಮಿಗಳನ್ನು ಗಮನದಲ್ಲಿಟ್ಟಿಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಟೀಕಿಸಿದರು.
ಬಜೆಟ್ನಲ್ಲಿ ಕೇಂದ್ರ ಸಚಿವರು ಕರ್ನಾಟಕಕ್ಕೆ ಹಿಡಿ ಮಣ್ಣು ಕೊಟ್ಟಿದ್ದಾರೆ. ಕರ್ನಾಟಕ ಸಂಪೂರ್ಣ ನಿರ್ಲಕ್ಷ÷್ಯ ಮಾಡಿದ್ದಾರೆ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಬಿಜೆಪಿ ನಾಯಕರು ಹೇಳಲಿ ಎಂದರು.
ಇಡೀ ದೇಶವನ್ನು ಖಾಸಗೀಕರಣ ಮಾಡುವ ಹುನ್ನಾರ ಇದೆ. ಅಂಬಾನಿ ಅಥವಾ ಆದಾನಿ ಮಾತ್ರ ಈ ದೇಶವನ್ನು ಲೀಡ್ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು. ಸ್ಟಾರ್ಟ್ ಅಪ್ ಅಂದ್ರೆ ಏನು ಅಂತ ಜನರಿಗೆ ಗೊತ್ತಿಲ್ಲ. ಸ್ಟಾರ್ಟ್ ಅಪ್ ಗೆ ತೆರಿಗೆ ವಿನಾಯಿತಿ ಕೊಡೋದಾಗಿ ಹೇಳಿದ್ದಾರೆ. ಸ್ಟಾರ್ಟ್ ಅಪ್ ಮಾಡಲು ಹಣ ಕೊಡುವವರು ಯಾರು ? ಬ್ಯಾಂಕ್ ಗಳು ಸಾಲವನ್ನೇ ಕೊಡುತ್ತಿಲ್ಲ. ಸಾರ್ಟ್ ಅಪ್ ಎಲ್ಲಿಂದ ? ಎಂದು ಪ್ರಶ್ನಿಸಿದರು. ನಿರುದ್ಯೋಗದ ಸಂಖ್ಯೆ ಕಳೆದ ಮೂರು ವರ್ಷದಿಂದ ಹೆಚ್ಚಳ ಆಗಿದೆ. ಇದು ಜನ ಸಾಮಾನ್ಯರಿಗೆ ಅನುಕೂಲಕರ ಬಜೆಟ್ ಅಲ್ಲ. ರೈತರಿಗೆ, ಬಡವರಿಗೆ ಚಿಪ್ ನೀಡಿದ್ದಾರೆ. ರೈತರನ್ನೂ ಕೂಡ ಖಾಸಗೀಕರಣ ಮಾಡುತ್ತಿದ್ದಾರೆ.
ವಂದೇ ಭಾರತ್ ರೈಲು ಘೋಷಣೆ ಮಾಡಿದ್ದಾರೆ. ವಂದೇ ಭಾರತ್ ರೈಲ್ವೆ ಇಲಾಖೆಯದ್ದಲ್ಲ, ಖಾಸಗಿ ರೈಲು. ರೈಲಿನಲ್ಲಿ ಶೌಚಾಲಯ ಉಪಯೋಗಿಸೋದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ತರುತ್ತಾರೆ.
ನದಿ ಜೋಡಣೆ ಮಾಡುತ್ತಾರೆ ಅಂತಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ. ಇನ್ನು ನದಿ ಜೋಡಣೆ ಯಾವಾಗ ಮಾಡ್ತೀರಾ..? ಎಂದು ಟೀಕಿಸಿದರು.