ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ರಾಜ್ಯಸಭಾ ಚುನಾವಣಾ ಕಣದಲ್ಲಿದ್ದ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಹಾಗೂ ಮನ್ಸೂರ್ ಅಲಿಖಾನ್ ಅವರು ಸಂಸತ್ತಿನ ಮೇಲ್ಮನೆಗೆ ಹೆಜ್ಜೆ ಇಟ್ಟರೆ, ಭಾರತೀಯ ಜನತಾ ಪಾರ್ಟಿ (BJP) ಇಂದ ಪ್ರೊ. ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೆಲುವಿನ ಬೆನ್ನಲ್ಲೇ ಪವನ್ ಖೇರಾ, ಮನ್ಸೂರ್ ಅಲಿಖಾನ್ ಮತ್ತು ಪ್ರೊ. ನಾಗರಾಜ್ ಅವರು ಚುನಾವಣಾಧಿಕಾರಿಗಳಿಂದ ಅಧಿಕೃತ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತುತ ದೆಹಲಿಯಲ್ಲಿದ್ದು, ಬೆಂಗಳೂರಿಗೆ ಮರಳಿದ ನಂತರ ತಮ್ಮ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಿದ್ದಾರೆ.
ಕನ್ನಡ ಕಲಿಯುವುದಾಗಿ ಪವನ್ ಖೇರಾ ಶಪಥ!
ರಾಜ್ಯಸಭೆ ಸದಸ್ಯರಾಗಿ ಅಧಿಕೃತವಾಗಿ ಆಯ್ಕೆಯಾದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಕರ್ನಾಟಕವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. “ಕನ್ನಡ ಅತ್ಯಂತ ಸುಂದರವಾದ ಭಾಷೆ. ಮುಂದಿನ ಬಾರಿ ನಾನು ಕರ್ನಾಟಕಕ್ಕೆ ಭೇಟಿ ನೀಡುವಾಗ ಖಂಡಿತವಾಗಿಯೂ ಕನ್ನಡವನ್ನು ಕಲಿತುಕೊಂಡೇ ಬರುತ್ತೇನೆ” ಎಂದು ಕನ್ನಡಿಗರ ಮನಗೆಲ್ಲುವ ಶಪಥ ಮಾಡಿದರು. ಈ ಮೂಲಕ ರಾಜ್ಯಸಭಾ ಚುನಾವಣೆಯ ಪ್ರಕ್ರಿಯೆ ಯಾವುದೇ ಜಿದ್ದಾಜಿದ್ದಿ ಇಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.



