ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಭಾಗದ ಬಹುವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಣಯವನ್ನು ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ನಡೆಯುತ್ತಿದ್ದ ಸುದೀರ್ಘ ಹೋರಾಟಕ್ಕೆ ಮಹತ್ವದ ತಿರುವು ದೊರೆತಂತಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಹಾಗೂ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಒಟ್ಟು 61 ಕಾರ್ಯಸೂಚಿಗಳಿಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಜಾಗತಿಕ ಮಟ್ಟದ ಡೇಟಾ ಸೆಂಟರ್ ಹಬ್ ಆಗಲಿದೆ
ಅಷ್ಟೇ ಅಲ್ಲದೆ ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026-2031ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೊಸ ನೀತಿಯ ಮೂಲಕ ಕರ್ನಾಟಕವನ್ನು ಸುಸ್ಥಿರ ಹಾಗೂ ಜಾಗತಿಕ ಮಟ್ಟದ ಡೇಟಾ ಸೆಂಟರ್ ಹಬ್ ಆಗಿ ರೂಪಿಸುವ ಉದ್ದೇಶ ಹೊಂದಲಾಗಿದೆ.
ಡೇಟಾ ಸೆಂಟರ್ಗಳ ವಿಸ್ತರಣೆಯೊಂದಿಗೆ ವಿದ್ಯುತ್, ನೀರು ಮತ್ತು ಇತರೆ ಸಂಪನ್ಮೂಲಗಳ ಸಮರ್ಥ ಬಳಕೆ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಹಾಗೂ ಕಾರ್ಬನ್ ಉತ್ಸರ್ಜನೆ ತಗ್ಗಿಸುವ ಕ್ರಮಗಳಿಗೆ ನೀತಿಯಲ್ಲಿ ಒತ್ತು ನೀಡಲಾಗಿದೆ.
2026ರಿಂದ 2031ರವರೆಗೆ ಜಾರಿಯಾಗಲಿರುವ ನೀತಿಯಡಿ ಒಟ್ಟು ರೂ.1,300.45 ಕೋಟಿ ಮೊತ್ತದ ಬಜೆಟ್ ಚೌಕಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಂಡವಾಳ ಹೂಡಿಕೆ, ಎಡ್ಜ್ ಡೇಟಾ ಸೆಂಟರ್ಗಳು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯ, ಮೌಲ್ಯ ಸರಪಳಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆ ಆಧಾರಿತ ಪ್ರೋತ್ಸಾಹಕಗಳಿಗೆ ಆದ್ಯತೆ ನೀಡಲಾಗಿದೆ.



