ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯದ ವಿಧಾನಸಭೆಯ 15ನೇ ಮತ್ತು ಅಂತಿಮ ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗಲಿದೆ. ಫೆಬ್ರುವರಿ 17ರಂದು ಬಜೆಟ್ ಮಂಡನೆಯಾಗಲಿದ್ದು, 24ರವರೆಗೆ ಅಧಿವೇಶನ ನಡೆಯಲಿದೆ. ಇಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17 ರಂದು 2023-2024 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲಿದ್ದು, ಫೆಬ್ರವರಿ 24 ರಂದು ಅಧಿವೇಶನ ಮುಗಿಯುವ ಮುನ್ನ ಐದು ದಿನಗಳ ಕಾಲ ಚರ್ಚೆ ನಡೆಯಲಿದೆ.
ಚುನಾವಣಾ ವರ್ಷದಲ್ಲಿ ಗಿಫ್ಟ್ ಬಜೆಟ್ ಮಂಡಿಸಲು ಸಿಎಂ ತಯಾರಿ ನಡೆಸಿದ್ದು, ಹಲವು ಜನಪರ ಘೋಷಣೆ ಮಾಡಲು ಪ್ಲಾನ್ ನಡೆದಿದೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಕುತೂಹಲ ಮೂಡಿಸಿದೆ.
“ಸಾಂವಿಧಾನಿಕ ಜವಾಬ್ದಾರಿಗಳನ್ನು ಪೂರೈಸಲು, ನಾವು ಮುಂದಿನ ಚುನಾವಣೆಗಳನ್ನು ಪರಿಗಣಿಸಿ ಒಂದು ಸಣ್ಣ ಅಧಿವೇಶನವನ್ನುನಿಗದಿಪಡಿಸಿದ್ದೇವೆ. ಪಕ್ಷಗಳು ಅದನ್ನು ಸದುಪಯೋಗಪಡಿಸಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು.
ಕೊನೆಯ ಅಧಿವೇಶನವೆಂದು ಯಾರೂ ಗೈರಾಗದೇ ತಪ್ಪದೇ ಹಾಜರಾಗಿ ಶಿಸ್ತು ತೋರಬೇಕೆಂದು ಸ್ಪೀಕರ್ ವಿಶ್ವೇಶ ಹೆಗಡೆ ಕಾಗೇರಿ ನಿನ್ನೆ ಎಲ್ಲಾ ಸದಸ್ಯರಿಗೂ ಮನವಿ ಮಾಡಿದ್ದಾರೆ.
ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಧಾನಸೌಧದಿಂದ 2 ಕಿಮೀ ಸುತ್ತಲಿನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.