ಕರುನಾಡು ನವೋದ್ಯಮ ಭವಿಷ್ಯದ ತಾಣ: ಸಚಿವ ಡಾ.ಅಶ್ವಥನಾರಾಯಣ

ಹೊಸ ದಿಗಂತ ವರದಿ, ಕಲಬುರಗಿ:

ಕಲ್ಯಾಣ ಕರ್ನಾಟಕ ಭಾಗ ಒಳಗೊಂಡಂತೆ ರಾಜ್ಯದಲ್ಲಿ ಸ್ಟಾರ್ಟ್-ಅಪ್ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಸವಲತ್ತು ನೀಡುತ್ತಿದು, ಭವಿಷ್ಯದಲ್ಲಿ ಕರ್ನಾಟಕವು ನವೋದ್ಯಮಗಳ ತಾಣವಾಗಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಅಶ್ವತ್ಥನಾರಾಯಣ ಸಿ.ಎನ್. ಹೇಳಿದರು.
ಶನಿವಾರ ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿದ ಬೃಹತ್ “ಉದ್ಯೋಗ ಮೇಳ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ನವೋದ್ಯಮದಲ್ಲಿ ದೊಡ್ಡಣ್ಣ ಅಮೇರಿಕಾ ಮೊದಲು, ಚೀನಾ ದ್ವಿತೀಯ ಮತ್ತು ಮೂರನೇ ಸ್ಥಾನದಲ್ಲಿ ಭಾರತವಿದ್ದರೆ, ನಾಲ್ಕನೇ ಸ್ಥಾನ ಕರ್ನಾಟಕದ್ದಾಗಿದೆ. ಇದು ವಿಶ್ವಗುರುವಿನತ್ತ ಭಾರತದ ಗುರಿಗೆ ನವ ಕರ್ನಾಟಕ ತಳಹದಿಯಾಗಿದೆ. ದೇಶದಲ್ಲಿಯೇ ನವೋದ್ಯಮಿಗಳ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಪಣತೊಟ್ಟಿದೆ. ಅದಕ್ಕೆಂದೆ ವಿಫುಲ ಅವಕಾಶಗಳನ್ನು ನೀಡಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ನಮ್ಮ ಪ್ರಥಮಾದ್ಯತೆಯಾಗಿದೆ. ಇಂದಿಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 5000ಕ್ಕೂ ಹೆಚ್ಚಿನ ಉದ್ಯೋಗಗಳು ಸ್ಥಳೀಯರಿಗೆ ಸಿಗಲಿದೆ. ಇಂದಿನ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರಕದವರು ನಮ್ಮ ಗುರಿಯಾಗುತ್ತಾರೆ. ಮಾರುಕಟ್ಟೆಯಲ್ಲಿನ ಬೇಡಿಕೆ ಅಧಾರದಂತೆ ಐ.ಟಿ.ಐ. ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ 150 ಐ.ಟಿ.ಐ. ಸಂಸ್ಥೆಗಳನ್ನು ವಿಶ್ವ ದರ್ಜೆಗೆ ಏರಿಸಲಾಗಿದೆ ಎಂದರು.
ರಾಜ್ಯದಲ್ಲಿ 21ನೇ ಶತಮಾನಕ್ಕೆ ಪೂರಕವಾಗಿ ಭವಿಷ್ಯದ ಕೌಶಲ್ಯವನ್ನು ಆಧಾರವಾಗಿಟ್ಟುಕೊಂಡು ಸ್ಮಾರ್ಟ್ ಕ್ಲಾಸ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ತಂತ್ರಜ್ಞಾನ ಅರಿಯುವುದು ತುಂಬಾ ಅವಶ್ಯಕವಾಗಿದೆ,. ಇದಕ್ಕಾಗಿ 1200 ಹೊಸ ಭವಿಷ್ಯದ ಕೌಶಲ್ಯಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಶಾಸಕರಾದ ಸುನೀಲ ವಲ್ಯಾಪೂರೆ, ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್, ಜಿ.ಪಂ. ಸಿ.ಇ.ಓ ಡಾ.ದಿಲೀಷ್ ಸಸಿ, ಹೆಚ್.ಕೆ.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಸಿ. ಬಿಲಗುಂದಿ, ಹೆಚ್.ಕೆ.ಸಿ.ಸಿ.ಐ ಅಧ್ಯಕ್ಷ ಪ್ರಶಾಂತ ಮಾನಕರ್, ಮುಖಂಡ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!