ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಜಾಗತಿಕ ಉಗ್ರರ ಪಟ್ಟಿಗೆ ಸೇರಿರುವ ಲಷ್ಕರ್ ಎ ತಯ್ಬಾ ಭಯೋತ್ಪಾದಕ ಅಬ್ದುಲ್ ರಹಮಾನ್ ಮಕ್ಕಾನಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕಾಶ್ಮೀರವನ್ನು ʼಪಾಕಿಸ್ತಾನದ ರಾಷ್ಟ್ರೀಯ ಸಮಸ್ಯೆʼ ಎಂದಿದ್ದಾನೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ಯ ಉಪ ನಾಯಕ ಮಕ್ಕಾನಿ ಲಾಹೋರ್ನ ಕೋಟ್ ಲಖ್ಪತ್ ಜೈಲಿನಿಂದ ವೀಡಿಯೊವನ್ನು ಬಿಡುಗಡೆ ಮಾಡಿದ್ದು ತನಗೆ ಅಲ್ಕೈದಾ ಅಥವಾ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗಳ ಸಂಪರ್ಕವಿಲ್ಲ ಎಂದಿದ್ದಾನೆ. ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಉಗ್ರ ಮಕ್ಕಾನಿ ʼಕಾಶ್ಮೀರದ ಜನರ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಸಮಸ್ಯೆಯನ್ನು ಪರಿಹರಿಸಬೇಕುʼ ಎಂದಿದ್ದಾನೆ.
“ಕಾಶ್ಮೀರಕ್ಕೆ ಸಂಬಂಧಿಸಿದಂತೆ, ನಾವು ಪ್ರಮುಖ ಸ್ಥಾನವನ್ನು ಹೊಂದಿದ್ದೇವೆ, ನಾವು ಅದನ್ನು ಪಾಕಿಸ್ತಾನದ ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸುತ್ತೇವೆ ಮತ್ತು ಕಾಶ್ಮೀರದ ಜನರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಇದನ್ನು ಪರಿಹರಿಸಬೇಕು” ಎಂದು ಆತ ವೀಡಿಯೋದಲ್ಲಿ ಹೇಳಿದ್ದಾನೆ ಎಂದು ಪಿಟಿಐ ವರದಿಯೊಂದು ಹೇಳಿದೆ.
26/11 ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಹಾಗು ಲಷ್ಕರ್ ಎ ತಯ್ಬಾದ ಉಗ್ರ ಸಂಚಿನ ಹಿನ್ನೆಲೆಯಲ್ಲಿ ಆತನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕುರಿತು ಭಾರತ ಹಾಗು ಅಮೆರಿಕ ಹಿಂದಿನಿಂದಲೂ ಒತ್ತಾಯಿಸಿದ್ದವು. ಆದರೆ ಚೀನಾ ತನ್ನ ವಿಶೇಷ ಅಧಿಕಾರದಿಂದ ಇದನ್ನು ತಡೆಹಿಡಿದಿತ್ತು. ಕೆಲದಿನಗಳ ಹಿಂದೆ ಚೀನಾ ಈ ನಿರ್ಧಾರದಿಂದ ಹಿಂದೆ ಸರಿದ ಪರಿಣಾಮ ಮಕ್ಕಾನಿಯನ್ನು ವಿಶ್ವ ಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲಾಗಿದೆ.