ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಕಾಶ್ಮೀರಿ ವಿದ್ಯಾರ್ಥಿಯೊಬ್ಬರು ತಮ್ಮ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ʻಮಾರಣಾಂತಿಕ ಹಲ್ಲೆʼ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಿನು ರಾಣಾ, ಘಟನೆ ಕುರಿತು ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳ ಸುರಕ್ಷತೆ, ವಿದ್ಯಾರ್ಥಿಗಳ ಕಾಳಜಿ, ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ದೃಢಪಟ್ಟಿಲ್ಲ ಈ ಬಗ್ಗೆ ಮಾತುಕತೆ ನಡೆಸಿ, ಅಭದ್ರತೆ ಕಂಡುಬಂದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ದಾಳಿ ಆರೋಪಿಸಿದ ಕಾಶ್ಮೀರಿ ವಿದ್ಯಾರ್ಥಿಯನ್ನು ಜಿಬ್ರಾನ್ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಕ್ಯಾಂಪಸ್ನಲ್ಲಿ ಗಲಾಟೆ ಮಾಡುತ್ತಿದ್ದ ಗುಂಪನ್ನು ಹೊರಹೋಗುವಂತೆ ಹೇಳಿದ್ದಕ್ಕೆ ಹೊರಗಿನಿಂದ ಬಂದವರು ತನ್ನ ಮೇಲೆ ದಾಳಿ ನಡೆಸಿದ್ದಾಗಿ ವಿದ್ಯಾರ್ಥಿ ಆರೋಪಿಸಿದ್ದಾರೆ. ನಾನು ಮತ್ತು ನನ್ನ ರೂಮ್ಮೇಟ್ಸ್ ವಿಶ್ವವಿದ್ಯಾನಿಲಯ ಆಡಳಿತಕ್ಕೆ ಕರೆ ಮಾಡಿದರೂ ಅವರು ನಮಗೆ ಸಹಕರಿಸಲಿಲ್ಲ. ಬದಲಿಗೆ ಕ್ಷಮೆಯಾಚಿಸುವಂತೆ ನನಗೆ ಹೇಳಲಾಯಿತು ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡರು.
ಘಟನೆ ಬಳಿಕ ನಾವು ಶಾಂತಿಯುತ ಪ್ರತಿಭಟನೆ ನಡೆಸಿ ಗೇಟ್ಗೆ ಬೀಗ ಹಾಕಿದ್ದೇವೆ. ನನ್ನ ಮೇಲೆ ದಾಳಿ ಮಾಡಿದವರು ನೀವು ಭಯೋತ್ಪಾದಕರು, ನಮ್ಮನ್ನು ಗುಂಡಿಕ್ಕಿ ಕೊಂದು ಬಿಡಬೇಕು ಎಂದು ನಿಂದಿಸಿದರು. ಪ್ರತಿಭಟನೆಯ ಸಮಯದಲ್ಲೂ ನಮ್ಮನ್ನು ಥಳಿಸಿದರು ಎಂದರು. ಇದೇ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಶ್ಮೀರಿ ವಿದ್ಯಾರ್ಥಿ ಮತ್ತು ಗಾಜಿಪುರದ ವಿದ್ಯಾರ್ಥಿ ಗುಂಪಿನ ನಡುವೆ ಕೆಲವು ಸಮಸ್ಯೆಗಳಿವೆ ಎಂಬ ಮಾಹಿತಿ ನಮಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.