ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಇಂದು ದೆಹಲಿಯ ಸರ್ದಾರ್ ಪಟೇಲ್ ಮಾರ್ಗದಲ್ಲಿ ಬಿಆರ್ಎಸ್ನ ತಾತ್ಕಾಲಿಕ ಕಚೇರಿಯನ್ನು ಉದ್ಘಾಟಿಸಲಿದ್ದು, ಪಕ್ಷದ ಧ್ವಜಾರೋಹಣ ಮಾಡಲಿದ್ದಾರೆ. ಇಂದು ಮಧ್ಯಾಹ್ನ 12.37ಕ್ಕೆ ಆ ಕಚೇರಿಯನ್ನು ಆರಂಭಿಸಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ.
ತೆಲಂಗಾಣ ಸಚಿವರು, ಟಿಆರ್ಎಸ್ ಶಾಸಕರು ಮತ್ತು ಸಂಸದರು ಈಗಾಗಲೇ ದೆಹಲಿ ತಲುಪಿದ್ದಾರೆ. ಅಲ್ಲದೆ, ದೇಶದ ಹಲವು ರಾಜ್ಯಗಳ ಮುಖಂಡರು, ರೈತ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿನ್ನೆ ಕೆಸಿಆರ್ ಅವರು ಅಲ್ಲಿನ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಯಾಗಶಾಲೆ ವೀಕ್ಷಿಸಿದರು. ಪಕ್ಷದ ಶಾಶ್ವತ ಭವನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ನವಚಂಡಿ ಹೋಮ ಇಂದು ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಲಿದ್ದು, ಇದರಲ್ಲಿ ಕೆಸಿಆರ್ ದಂಪತಿ ಭಾಗವಹಿಸಲಿದ್ದಾರೆ. ಬಿಆರ್ಎಸ್ ಪಕ್ಷದ ಚಟುವಟಿಕೆಗಳ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಟ್ರಾಫಿಕ್ ಸಮಸ್ಯೆಯಾಗದಂತೆ ವಿವಿಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಟಿಆರ್ ಎಸ್ ಹೆಸರನ್ನು ಬಿಆರ್ ಎಸ್ ಎಂದು ಬದಲಾಯಿಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿತ್ತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬಿಆರ್ಎಸ್ ಸ್ಪರ್ಧಿಸಲಿದೆ.