ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಹಾರ್ ಜೈಲಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿಧಾನಗತಿಯಲ್ಲಿ ಸಾವಿನತ್ತ ತಳ್ಳಲಾಗುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಗಂಭೀರ ಆರೋಪ ಮಾಡಿದ್ದಾರೆ.
ಜೈಲಿನೊಳಗೆ ಇನ್ಸುಲಿನ್ ಮತ್ತು ಕೇಜ್ರಿವಾಲ್ ಅವರ ವೈದ್ಯರ ಸಮಾಲೋಚನೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ ಮರುದಿನವೇ ಈ ಆರೋಪ ಮಾಡಲಾಗಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಜೈಲು ಆಡಳಿತವು ಇನ್ಸುಲಿನ್ ನೀಡಲು ನಿರಾಕರಿಸುತ್ತಿದೆ. ಈ ಮೂಲಕ ಕೇಜ್ರಿವಾಲ್ ಅವರ ನಿಧಾನಗತಿಯ ಸಾವಿಗೆ ಪಿತೂರಿ ನಡೆಯುತ್ತಿದೆ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಲು ಬಯಸುತ್ತೇನೆ ಎಂದರು.
ಈ ಮೊದಲು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಾದ ಮಂಡಿಸಿದ್ದ ಇಡಿ (ED) ಪರ ವಕೀಲರು, ಜಾಮೀನು ಪಡೆಯುವ ಉದ್ದೇಶದಿಂದ ಕೇಜ್ರಿವಾಲ್ ಅವರು ಮಾವು, ಸಿಹಿ ತಿನಿಸು ಸೇವಿಸಿ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು.
ಇದಕ್ಕೆ ಉತ್ತರಿಸಿದ ಕೇಜ್ರಿವಾಲ್ ಪರ ವಕೀಲರು, ಕ್ಷುಲ್ಲಕ ಆರೋಪ ಮಾಡಲಾಗುತ್ತಿದೆ. ಜಾಮೀನಿಗಾಗಿ ದೆಹಲಿ ಸಿಎಂ ಪಾರ್ಶ್ವವಾಯು ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ ಎಂದು ಹೇಳಿದ್ದರು.