January22, 2026
Thursday, January 22, 2026
spot_img

ಕೋಗಿಲು ಬಡಾವಣೆ ವಿಚಾರದಲ್ಲಿ ಕೇರಳ, ಪಾಕಿಸ್ತಾನ ಕ್ಯಾತೆ: ಈ ನಡೆಗೆ ಕೇಂದ್ರ ಸಚಿವ ಸೋಮಣ್ಣ ಕಿಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನೆಲಸಮಗೊಳಿಸಿದ ವಿಚಾರ ದೇಶಾದ್ಯಂತ ಚರ್ಚೆಯಲ್ಲಿದೆ. ಆದರೆ ಯಾವುದಕ್ಕೂ ಸಂಬಂಧವೇ ಇಲ್ಲದ ಪಾಪಿ ಪಾಕಿಸ್ತಾನವೂ ಈ ವಿಚಾರದಲ್ಲಿ ಮೂಗು ತೂರಿಸಿರೋದೀಗ ಭಾರಿ ಆಕ್ರೋಶಕ್ಕೆ ಕಾರಣವಾಗ್ತಿದೆ. ಈ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿ ಕಾರಿದ್ದಾರೆ.

ವಿ. ಸೋಮಣ್ಣ ಅವರ ಎಕ್ಸ್​​ ಪೋಸ್ಟ್​​ ನಲ್ಲಿ , ತಮ್ಮಲ್ಲೇ ಹುಳುಕಿಟ್ಟುಕೊಂಡಿರುವ ಕೇರಳ ಸರ್ಕಾರ ಮತ್ತು ಪಾಕಿಸ್ತಾನ, ಕರ್ನಾಟಕದ ವಿಚಾರದಲ್ಲಿ ಮೂಗುತೂರಿಸುತ್ತಿರುವುದು ನಾಚಿಕೆಗೇಡು. ಈ ನಡುವೆ ಕೇರಳ ಮತ್ತು ಪಾಕಿಸ್ತಾನ ಸರ್ಕಾರಗಳು ಕ್ಯಾತೆ ತೆಗೆದ ಕೂಡಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಓಲೈಕೆಗಾಗಿ ಸಮಜಾಯಿಷಿ ನೀಡುತ್ತಿರುವುದು ಅದಕ್ಕಿಂತಲೂ ವಿಪರ್ಯಾಸದ ಸಂಗತಿ. ಒತ್ತುವರಿ ಜಾಗದಲ್ಲಿದ್ದ ಮನೆಗಳನ್ನು ತೆರವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟ ಮೇಲೆ, ಸಂತ್ರಸ್ತರಿಗೆ ಹೊಸವರ್ಷಕ್ಕೆ ಮನೆ ನಿರ್ಮಿಸಿಕೊಡುತ್ತೇವೆ ಎನ್ನುವ ಭರವಸೆ ನೀಡಿರುವುದರ ಹಿಂದಿನ ಹುನ್ನಾರವೇನು? ಅಷ್ಟಕ್ಕೂ ಅಕ್ರಮ ಬಡಾವಣೆಗಳನ್ನು ನಿರ್ಮಿಸಿಕೊಂಡವರನ್ನು ಸಂತ್ರಸ್ತರು ಎನ್ನುವುದಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಅದೆಷ್ಟೋ ನಿರಾಶ್ರಿತರು, ಅಲೆಮಾರಿ ಕೂಲಿ ಕಾರ್ಮಿಕ ವರ್ಗದವರು ಸೂರಿಲ್ಲದೆ ಹೆಣಗಾಡುತ್ತಿರುವುದು ಈ ಜಾಣ ಕುರುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸಮರ್ಪಕವಾಗಿ ನೋಟಿಸ್ ನೀಡಿದ ನಂತರವೇ ಮನೆಗಳನ್ನು ನಾಶ ಮಾಡಿರುವ ಅಧಿಕಾರಿಗಳ ಮೇಲೆ ತಪ್ಪಿತಸ್ಥರು ಎನ್ನುವ ಹಣೆಪಟ್ಟಿ ಹೊರಿಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆ ನೀಡುವ ಸಿಎಂ ಸಿದ್ದರಾಮಯ್ಯನವರಿಗೆ ಏನು ನೈತಿಕತೆಯಿದೆ? ಇಂತಹ ಮತೀಯ ರಾಜಕಾರಣಕ್ಕಿಳಿದು ಜನತೆಯಲ್ಲಿ ಕೋಮುದಳ್ಳುರಿಯನ್ನು ಹೆಚ್ಚಿಸುವುದೇ ಕಾಂಗ್ರೆಸ್‌ನ ಷಡ್ಯಂತ್ರ ಎನ್ನುವುದು ಜನತೆಗೆ ಅರ್ಥವಾಗಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.

Must Read