ಹೊಸದಿಗಂತ ವರದಿ ಉಡುಪಿ:
ಭಜನೆ ಮುಗಿಸಿ ವಾಪಸಾಗುತ್ತಿದ್ದ ಮಹಿಳೆಯೋರ್ವರ ಎರಡು ಎಳೆಯ ಕರಿಮಣಿ ಸರ ಹಾಗು ಹವಳದ ಸರವನ್ನು ಬೈಕ್ ನಲ್ಲಿ ಬಂದ ಅಪರಿಚಿತನೋರ್ವ ದರೋಡೆ ಮಾಡಿದ ಘಟನೆ ಕಟಪಾಡಿ ವಿಶ್ವನಾಥ ಕ್ಷೇತ್ರದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪ್ರಕರಣದ ವಿವರ:
ಅ.17 ರಂದು ಭವಾನಿ (57), ಭಜನೆ ಕಾರ್ಯಕ್ರಮದ ನಿಮಿತ್ತ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಹೋಗಿ ಕಾಯಕ್ರಮ ಮುಗಿಸಿ ಕಟಪಾಡಿ ವಿಶ್ವನಾಥ ಕ್ಷೇತ್ರದಿಂದ ಕಟಪಾಡಿ ಒಳಗಿನ ರಸ್ತೆಯಲ್ಲಿ ಕಲ್ಲಾಪು ಕಡೆಗೆ ತನ್ನ ಪರಿಚಯದ ಬೇಬಿ ಎಂಬುವವರೊಂದಿಗೆ ನಡೆದುಕೊಂಡು ಬರುತ್ತಿದ್ದರು.
ಈ ವೇಳೆ ಮಧ್ನಾಹ್ನ 1:15 ಗಂಟೆಗೆ ಮೂಡಬೆಟ್ಟು ಗ್ರಾಮದ ಕಟಪಾಡಿ ಒಳರಸ್ತೆಯಲ್ಲಿ ನಿತ್ಯಾನಂದ ಹಾಲ್ ಹತ್ತಿರ ತಲುಪುತ್ತಿದ್ದಂತೆ ಕಲ್ಲಾಪು ಕಡೆಯಿಂದ ಬಂದ ಬೈಕ್ ಸವಾರನು ಭವಾನಿಯವರ ಬಳಿಗೆ ಬಂದು ಕುತ್ತಿಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಎರಡು ಎಳೆಯ ಕರಿಮಣಿ ಸರ ಮತ್ತು ಹವಳದ ಸರವನ್ನು ಎಳೆದುಕೊಂಡು ಕಟಪಾಡಿ ಕಡೆಗೆ ತೆರಳಿ ಪರಾರಿಯಾಗಿದ್ದಾನೆ. ಕರಿಮಣಿಯನ್ನು ಎಳೆದ ರಭಸಕ್ಕೆ ದೂರುದಾರರು, ರಸ್ತೆಯಲ್ಲಿ ಬಿದ್ದಿದ್ದು, ಕರಿಮಣಿ ಸರದ ಎರಡು ತುಂಡು ಸ್ಥಳದಲ್ಲಿ ಉಳಿದಿದೆ.
ಕಿತ್ತುಕೊಂಡು ಹೋದ ಕರಿಮಣಿ ಸರವು 5 ಪವನ್ ಚಿನ್ನ ಹೊಂದಿತ್ತು. ಸ್ಥಳದಲ್ಲಿ ದೊರೆತ ಕರಿಮಣಿ ಸರದ ತುಂಡು ಹೊರತು ಪಡಿಸಿ 4 ½ ಪವನ್ ತೂಕದ ಸರವನ್ನು ಸುಲಿಗೆ ಮಾಡಲಾಗಿದ್ದು ಮೌಲ್ಯ 1,60,000 ರೂ. ಆಗಿದೆ. ಹವಳದ ಸರವು ಸುಮಾರು 5 ಪವನ್ ಚಿನ್ನ ಹೊಂದಿದ್ದು ಮೌಲ್ಯ 1,80,000 ರೂಪಾಯಿ ಆಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.