ಹೊಸದಿಗಂತ ಡಿಜಿಟಲ್ ಡೆಸ್ಕ್
ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯಲ್ಲೀಗ ಖಾಕಿ ಕಣ್ಗಾವಲಿಟ್ಟಿದೆ. ದ.ಕ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆಯ ಬೆನ್ನಲ್ಲೇ ಸುರತ್ಕಲ್ ನಲ್ಲಿ ಕೊಲೆಯಾಗಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಖಾಕಿ ಹೈ ಅಲರ್ಟ್ ಆಗಿದ್ದು, ಹೆಚ್ಚುವರಿ ಗಸ್ತು ನಡೆಸುತ್ತಿದೆ. 12 ಚೆಕ್ ಪೋಸ್ಟ್ ಮತ್ತು 50 ಪಿಕೇಟಿಂಗ್ ಪೈಂಟ್ ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ 62 ಕಡೆ ಖಾಕಿ ವಿಶೇಷ ಕಣ್ಗಾವಲು
ಉಡುಪಿ ಜಿಲ್ಲೆಯ ಗಡಿಗಳಾದ ಹೆಜಮಾಡಿ, ಶಿರೂರು, ಆಗುಂಬೆ ಸೇರಿದಂತೆ ಜಿಲ್ಲೆಯನ್ನು ಪ್ರವೇಶಿಸುವ ಎಲ್ಲಾ ಮುಖ್ಯ ರಸ್ತೆಗಳು, ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರು ವಿಶೇಷವಾಗಿ ಗಸ್ತು ತಿರುಗುತ್ತಿದ್ದು, ಚೆಕ್ ಪೋಸ್ಟ್, ಪಿಕೆಂಟಿಂಗ್ ಗಳ ಮೂಲಕ ವಾಹನ ತಪಾಸಣೆ ನಡೆಸುತ್ತಿದ್ದಾರೆ.
50 ಪೀಕೆಟಿಂಗ್ ಪೈಂಟ್
ಜಿಲ್ಲೆಯ ಉದ್ಯಾವರ ಬಲಾಯಿಪಾದೆ, ಗಂಗೊಳ್ಳಿ, ನೇಜಾರು, ಹೂಡೆ, ಕುಂದಾಪುರ ಶಾಸ್ತ್ರಿ ಸರ್ಕಲ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶ ಮತ್ರು ಜನನಿಬಿಡ ಪ್ರದೇಶಗಳಲ್ಲಿ ಜಿಲ್ಲಾ ಪೋಲಿಸರು ವಿಶೇಷವಾಗಿ ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಹಿಂದೂ ಮುಖಂಡರಿಗೆ ಎಚ್ಚರಿಕೆ?
ಜಿಲ್ಲೆಯ ಹಿಂದು ಮುಖಂಡರು ಎಚ್ಚರ ವಹಿಸುವಂತೆ ಪೋಲಿಸರು ಸೂಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ವಿಚಾರವನ್ನು ಹಿಂದು ಮುಖಂಡರು ಅಲ್ಲಗೆಳೆದಿದ್ದಾರೆ. ಜೊತೆಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ಜಿಲ್ಲೆಯಲ್ಲಿ ಯಾವುದೇ ಮುಖಂಡರಿಗೂ ಈ ಸೂಚನೆಯನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ರಾತ್ರಿ ಗಸ್ತು ಹೆಚ್ಚಳ
ಜಿಲ್ಲೆಯಲ್ಲಿ ರಾತ್ರಿ ಗಸ್ತುಗಳನ್ನು ಹೆಚ್ಚಳ ಮಾಡಲಾಗಿದ್ದು, ಠಾಣಾಧಿಕಾರಿ, ವೃತ್ತನಿರೀಕ್ಷಕರು, ಡಿವೈಎಸ್ಪಿ, ಹೆಚ್ಚವರಿ ಎಸ್ಪಿ, ಎಸ್ಪಿಯವರು ಸೇರಿದಂತೆ ಜಿಲ್ಲಾ ಪೋಲಿಸರ ತಂಡ ನಾನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದು, ರಾತ್ರಿ ವೇಳೆಯಲ್ಲಿ ಗಸ್ತನ್ನು ಬಿಗಿಗೊಳಿಸಲಾಗಿದೆ.