ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅಪೌಷ್ಟಿಕತೆ ವಿರುದ್ಧದ ಹೋರಾಟವು ಹೆಚ್ಚಿನ ಯಶಸ್ಸು ಸಾಧಿಸುವ ಮೂಲಕ ದೇಶಕ್ಕೇ ಮಾದರಿಯಾಗಿದೆ. ಕಡಿಮೆ ಸಮಯದಲ್ಲಿ ಪರಿಣಾಮಾತ್ಮಕವಾಗಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಲ್ಲಿ ಅನುಸರಿಲಾದ ಮಾರ್ಗ ಯಾವುದು ಗೊತ್ತೇ..? ಅದಕ್ಕೆ ಉತ್ತರ ಖಿಚಡಿ.
ಹೌದು. ಖಿಚಡಿ, ಎಳ್ಳಿನುಂಡೆ, ಕರಿಬೇವಿನ ಚಟ್ನಿ ಮುಂತಾದ ಗ್ರಾಮೀಣ ಖಾದ್ಯಗಳನ್ನು ಬಳಸಿ ಗಡಿಚಿರೋಲಿಯಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲಾಗಿದೆ. ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ವಾಸವಿರುವ ಗಡ್ಚಿರೋಲಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಹೊಸ ಆಹಾರಕ್ರಮವನ್ನು ಪರಿಚಯಿಸಲಾಯಿತು. ಈ ಆಹಾರ ಕ್ರಮದಲ್ಲಿ ಗ್ರಾಮೀಣ ಖಾದ್ಯಗಳಾದ ಖಿಚಡಿ, ಎಳ್ಳಿನುಂಡೆ, ಕರಿಬೇವಿನ ಚಟ್ನಿ, ಶೇಂಗಾ, ಬೆಲ್ಲ, ಪಾಲಕ್ ಬೀಟ್ರೂಟ್ ಒಳಗೊಂಡ ಪರಾಠಾ ಗಳನ್ನು ಹೆಚ್ಚು ಬಳಸುವಂತೆ ಹೇಳಲಾಯಿತು. ಇದರ ಪರಿಣಾಮವಾಗಿ ಆರೇ ತಿಂಗಳಲ್ಲಿ ಅಪೌಷ್ಟಿಕತೆಯ ಪ್ರಮಾಣವು ಗಣನೀಯವಾಗಿ ಕುಸಿಯಿತು.
3,794 ಅಪೌಷ್ಟಿಕ ಮಕ್ಕಳು ಈ ವಿಧಾನದಿಂದಲೇ ಚೇತರಿಸಿಕೊಂಡಿದ್ದು, ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ, ತೂಕ ಕಡಿಮೆ ಇರುವ ಮಕ್ಕಳು ʼಖಿಚಡಿʼ ಪರಿಣಾಮದಿಂದ ಕೇವಲ ಆರೇ ತಿಂಗಳಲ್ಲಿ ಚೇತರಿಸಿಕೊಂಡಿದ್ದಾರೆ. ಆ ಮೂಲಕ ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಮಾದರಿಯಾಗಿ ನಿಂತಿದೆ ಗಡ್ಚಿರೋಲಿ.
ಗಡ್ಚಿರೋಲಿಯ ಈ ಪ್ರಯತ್ನವು ʼಭಾರತೀಯ ಅಡುಗೆಮನೆಯಲ್ಲಿ ಎಲ್ಲಾರೋಗಕ್ಕೂ ಔಷಧಿಯಿದೆʼ ಎಂಬುದನ್ನು ಸಾಬೀತು ಪಡಿಸಿದೆ.