ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಉಮಾಶ್ರೀ ಅವರು ಸದನದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಚಾರವಾಗಿ ಗಮನ ಸೆಳೆದರು.
ಹೆಣ್ಣು ಬ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಕೊಲ್ಲಲು ಮಚ್ಚು ಇನ್ನೊಂದು ಬೇಕಿಲ್ಲ, ಕೇವಲ ಯಂತ್ರದ ಮೂಲಕ ಭ್ರೂಣ ತೆಗೆದು ಹತ್ಯೆ ಮಾಡಲಾಗುತ್ತಿದೆ. ಹೆಣ್ಣು ಇಲ್ಲದೆ ವರ್ತಮಾನ, ಭೂತ, ಭವಿಷ್ಯ ಇಲ್ಲ. ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನು ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತೆ. ಆದರೆ ಅದನ್ನ ತೆಗೆದುಕೊಂಡು ಹೋಗಿ ಕಾವೇರಿ ಒಡಲಿಗೆ ಸೇರಿಸುತ್ತಾರೆ. ಇದನ್ನು ತಡೆಗೆ ಕಠಿಣ ಕಾನೂನು ಇಲ್ಲ. ಹಾಗಾಗಿ ಇದು ನಡೆಯುತ್ತಿದೆ ಎಂದು ಕಣ್ಣೀರಿಟ್ಟರು.
ಈ ವೇಳೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಹೇಳಿದರು.
ಇಂದು ಔಷಧಿ ಮೂಲಕವೇ ಭ್ರೂಣ ಹತ್ಯೆ ನಡೆಯುತ್ತಿದೆ. ರಾಜ್ಯಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ನಿರ್ಧರಿಸಿದ್ದೇವೆ. ಅನಧಿಕೃತ ಆಸ್ಪತ್ರೆ, ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ ಪರಿಶೀಲನೆ ನಡೆಸಿದ್ದೇವೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಉತ್ತರಿಸಿದರು.
ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು. ಹೆಣ್ಣು ಮಗು ಕುಟುಂಬಕ್ಕೆ ಸಮಾಜಕ್ಕೆ ಭಾರ ಅನ್ನುವ ಮನಸ್ಥಿತಿಯಿಂದಲೇ ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಕಾನೂನು ಉಲ್ಲಂಘಿಸಿದರೆ ಜೈಲು ಸೇರಬೇಕಾಗುತ್ತದೆ ಎಂಬುದಾಗಿ ತಪ್ಪಿತಸ್ಥರಲ್ಲಿ ಭಯ ಹುಟ್ಟಲು ಬಿಗಿಯಾದ ಕಾನೂನು ಕ್ರಮಗಳನ್ನು ರೂಪಿಸಲು ಮತ್ತು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸುವ ಎಲ್ಲಾ ಕ್ರಮಗಳನ್ನು ಏಕಕಾಲಕ್ಕೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.