ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡಿ ಎಂದು ಭಾರತಕ್ಕೆ ಅಮೆರಿಕ ಒತ್ತಾಯ ಮಾಡಿದೆ.
ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಕೈವಾಡ ಇದೆ ಎಂದು ಕೆನಡಾ ಆರೋಪ ಮಾಡಿದ್ದು, ಇದಕ್ಕೆ ಶ್ವೇತಭವನ ಕಳವಳ ವ್ಯಕ್ತಪಡಿಸಿದೆ.
ಭಾರತ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದಕ್ಕೂ ನಮಗೂ ಸಂಬಂಧ ಇಲ್ಲ, ನಮ್ಮ ಯಾವುದೇ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೊಸ ಸಂಸತ್ನಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದರು. ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಏಜೆನ್ಸಿ ನಡುವೆ ಸಭೆ ನಡೆದಿದ್ದು, ಯಾವುದಾದರೂ ಸಾಕ್ಷಿ ಆಧಾರಗಳಿದ್ದರೆ ನೀಡಿ, ಪುರಾವೆಗಳಿಲ್ಲ ಆರೋಪ ಮಾಡಬೇಡಿ ಎಂದು ಭಾರತ ಹೇಳಿದೆ.
ಈ ಮಧ್ಯೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿ ಎಂದು ಭಾರತಕ್ಕೆ ಅಮೆರಿಕ ಒತ್ತಾಯ ಮಾಡಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆಗೆ ಸಹಕಾರ ನೀಡುತ್ತೇವೆ. ಭಾರತದ ಗುಪ್ತಚರ ಸಂಸ್ಥೆಗಳಿಗೂ ಈ ಹತ್ಯೆಗೂ ಸಂಬಂಧ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತದ ಏಜೆಂಟ್ಗಳೇ ಹತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದು, ಅದೇ ಸಾಕ್ಷಿಗಳನ್ನು ತೋರಿಸಿ ಎಂದು ಭಾರತ ಸವಾಲು ಹಾಕಿದೆ.
ಭಯೋತ್ಪಾದಕರಿಗೆ ಈ ರೀತಿ ಸಾರ್ವಜನಿಕವಾಗಿ ಕೆನಡಾ ಸಿಂಪತಿ ತೋರಿಸುತ್ತಿದೆ. ಖಲಿಸ್ತಾನಿ ಭಯೋತ್ಪಾದಕರ ಮೇಲಿದ್ದ ಗಮನವನ್ನು ಬದಲಿಸಲು ಈ ದಾಳ ಉರುಳಿಸಿದ್ದಾರೆ. ಕೆನಡಾದಲ್ಲಿ ಆಶ್ರಯ ಪಡೆದಿರುವ ಈ ಉಗ್ರರು ಭಾರತದ ಸಮಗ್ರತೆಗೆ ಬೆದರಿಕೆ ಹಾಕಿದ್ದಾರೆ ಎಂದು ಭಾರತ ಹೇಳಿದೆ.