ಹೊಸದಿಗಂತ ವರದಿ ಬೇಲೂರು
ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಪಂಚಾಯಿತಿ ವ್ಯಾಪ್ತಿಯ ಕಿತ್ತಾವರ ಗುಡ್ಡದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪ್ರತಿವರ್ಷ ನಡೆಯುತ್ತಿದ್ದ ಪೂಜೋತ್ಸವವು ವೀರಭದ್ರೇಶ್ವರ ಹಾಗೂ ಬಸವಣ್ಣ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೃಥ್ವಿ ಬಿ.ಯು ನೇತೃತ್ವದಲ್ಲಿ ಈ ಬಾರಿ ಜರುಗಿತು. ಕಣಗುಪ್ಪೆ ಗ್ರಾಮದ ವಸಂತಯ್ಯನವರು ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ಡ್ರೋನ್ ಕ್ಯಾಮರಾದ ಮೂಲಕ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರಕೃತಿಯನ್ನು ಸೆರೆಹಿಡಿಯಲಾಯಿತು.
ಚಳಿ ಹಾಗೂ ಕತ್ತಲನ್ನು ಲೆಕ್ಕಿಸದೇ ಮಹಿಳೆಯರು,ಮಕ್ಕಳು,ವೃದ್ಧರು ಬೆಟ್ಟವನ್ನು ಹತ್ತಿ ದೇವರ ದರ್ಶನ ಮಾಡಿದರು. ಪಟಾಕಿಗಳನ್ನು ಸಿಡಿಸುವುದ ಮೂಲಕ ಭಕ್ತಾಧಿಗಳು ಸಂತಸಪಟ್ಟರು. ಅನುಘಟ್ಟ,ಕಿತ್ತಾವರ, ದೋಲನಮನೆ, ದೊಡ್ಡಸಾಲಾವರ,ಹೆಗ್ಗಡಿಹಳ್ಳಿ, ಜೈ ಭೀಮ್ ನಗರ ಗ್ರಾಮಗಳ ನೂರಾರು ಭಕ್ತಾಧಿಗಳು ತಮ್ಮ ಕೈಲಾದ ಧನಸಹಾಯ ಮಾಡುವುದರ ಮೂಲಕ ಕಾರ್ಯಕ್ರಮದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು.