ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಕೆಆರ್ ಟಿಸಿ ವತಿಯಿಂದ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಪ್ರಯಾಣಿಕರ ಅನೂಕೂಲಕ್ಕಾಗಿ ಕಲಬುರಗಿಯಿಂದ ದಾಂಡೇಲಿಗೆ ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ.
ಧಾರವಾಡ- ಹುಬ್ಬಳ್ಳಿ ಸಂಪರ್ಕದ ಜೊತೆಗೆ ವನ್ಯಜೀವಿಧಾಮ, ಕಾಳಿನದಿ ತಟದಲ್ಲಿರುವ ದಾಂಡೇಲಿ ವೀಕ್ಷಣೆಗೆ ಈ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಲಬುರಗಿ ಕೇಂದ್ರ ನಿಲ್ದಾಣದಿಂದ ರಾತ್ರಿ 10 ಗಂಟೆಗೆ ಹೋರಟು ಮರು ದಿನ ಬೆಳಿಗ್ಗೆ 8.30ಕ್ಕೆ ದಾಂಡೇಲಿಗೆ ತಲುಪಲಿದೆ. ಅದೇ ರೀತಿ ದಾಂಡೇಲಿ ಬಸ್ ನಿಲ್ದಾಣದಿಂದ ಸಂಜೆ 6.30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ.
ಜೇವರ್ಗಿ, ಶಹಾಪುರ, ಲಿಂಗಸಗೂರು, ಕುಷ್ಟಗಿ, ಗದಗ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ದಾಂಡೇಲಿಗೆ ತಲುಪುತ್ತದೆ.ಪ್ರತಿ ಟಿಕೆಟ್ ದರ 1 ಸಾವಿರದ 65 ರೂಪಾಯಿ ಇದ್ದು, ಕೆ ಎಸ್ ಆರ್ ಟಿಸಿಯ ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿಯೂ ಆಫ್ಲೈನ್ ಟಿಕೆಟ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿ, ದಾಂಡೇಲಿ ಈಜು ಕ್ರೀಡೆಗಳಂತಹ ಮನರಂಜನೆಯ ತಾಣವಾಗಿದ್ದು, ಪ್ರೇಕ್ಷಣೀಯ ಸ್ಥಳಗಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾರಿಗೆ ಸೇವೆ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಸಾರಿಗೆ ನಿಯಂತ್ರಣ ಅಧಿಕಾರಿ ಎಸ್.ಜಿ ಗಂಗಾಧರ್, ಕಲಬುರಗಿ ಭಾಗದ ಜನತೆಗೆ ಪ್ರವಾಸಕ್ಕೆ ಅನುಕೂಲ ಕಲ್ಪಿಸಲು ಈ ವ್ಯವಸ್ಥೆ ಆರಂಭಿಸಲಾಗಿದೆ ಎಂದರು.



