ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಕೊಡಗಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಮಳೆಯಾದಾಗ ಆಗುವ ಹಾನಿಯನ್ನು ತಪ್ಪಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
2018ರಲ್ಲಿ ಕೊಡಗಿನಾದ್ಯಂತ ಭೀಕರ ಪ್ರಕೃತಿ ವಿಕೋಪ ಎದುರಾಗಿದ್ದು, ತದನಂತರ ಮಳೆಗೂ ಮುನ್ನವೇ ಜಿಲ್ಲಾಡಳಿತ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಮುಂಗಾರು ಮಳೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಪಂಚಾಯತ್ಗಳಿಗೆ ವಿಶೇಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಹಲವು ಪ್ರದೇಶಗಳನ್ನು ಸೂಕ್ಷ್ಮ ಮತ್ತು ದುರ್ಬಲ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳ ಬಗ್ಗೆ ಭಾರೀ ನಿಗ ಇಡಲಾಗಿದೆ.
ಒಟ್ಟಾರೆ ೪೪ ಪ್ರದೇಶಗಳನ್ನು ಭೂಕುಸಿತ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಕಳೆದ ಮಳೆಗಾಲದಲ್ಲಿ ಈ ಪ್ರದೇಶಗಳು ಭಾರೀ ಹಾನಿಗೊಳಗಾಗಿದ್ದವು. ಇಷ್ಟೆಲ್ಲಾ ತಯಾರಿ ಇದ್ದರೂ ತುರ್ತು ಪರಿಸ್ಥಿತಿ ಎದುರಿಸಲು ಕೊಡಗು ಸಜ್ಜಾಗಿದ್ದು, 25 ಜನರ ಎನ್ಡಿಆರ್ಎಫ್ ತಂಡವನ್ನು ಮಡಿಕೇರಿಯಲ್ಲಿ ನಿಯೋಜಿಸಲಾಗಿದೆ.
ಈ ತಂಡದ ಜೊತೆಯಲ್ಲಿ ಪೊಲೀಸರು, ಗೃಹ ರಕ್ಷಕರು, ಅಗ್ನಿ ಶಾಮಕ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸಾಥ್ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಕಂಟ್ರೋಲ್ ರೂಂ ಕೂಡ ತೆರೆಯಲಾಗಿದ್ದು, ಮಳೆಗೆ ಸಂಬಂಧಿಸಿದ ಹಾನಿಗಳನ್ನು ತಡೆಯಲು ಕೊಡಗು ಸಂಪೂರ್ಣ ಸಜ್ಜಾಗಿದೆ.