ಹೊಸದಿಗಂತ ವರದಿ ಕುಶಾಲನಗರ:
ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸಾವಿಗೀಡಾದ ಘಟನೆ ಅರಕಲಗೂಡು ಬಳಿ ನಡೆದಿದೆ.
ಮೃತರನ್ನು ಕುಶಾಲನಗರ ಸಮೀಪದ ಸೀಗೆಹೊಸೂರು ಗ್ರಾಮದ ನಿವಾಸಿ ಗಣೇಶ್ ಎಂಬವರ ಪುತ್ರಿ ಎಸ್.ಜಿ.ಶೋಭಾ (25) ಎಂದು ಗುರುತಿಸಲಾಗಿದೆ.
ಶೋಭಾ ಅವರನ್ನು ಕಳೆದ 36 ದಿನಗಳ ಹಿಂದೆ ಅರಕಲಗೂಡು ತಾಲೂಕಿನ ಇಬ್ಬಡಿ ಗ್ರಾಮದ ನವೀನ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಬ್ಬರು ಸೋಮವಾರ ಅರಕಲಗೂಡುವಿನಿಂದ ಹೊಳೆನರಸೀಪುರಕ್ಕೆ ಬೈಕ್ ನಲ್ಲಿ ತೆರಳುತ್ತಿರುವ ವೇಳೆ ಬೈಕ್ಗೆ ಲಾರಿ ಡಿಕ್ಕಿಯಾಗಿದೆ. ಈ ಸಂದರ್ಭ ರಸ್ತೆಯ ಮೇಲೆ ಬಿದ್ದ ಶೋಭಾ ಅವರ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದ ಹಿನ್ನೆಲೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಆಕೆಯ ಪತಿ ನವೀನ್ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಮತ್ತು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.