TMC ನಾಯಕ ಶೇಖ್ ಷಹಜಹಾನ್ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮುಗ್ಧ ಮತ್ತು ಬಡ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಭೂಕಬಳಿಕೆ ಆರೋಪ ಹೊತ್ತಿದ್ದ ತೃಣಮೂಲ ಕಾಂಗ್ರೆಸ್ ಪ್ರಭಾವಿ ನಾಯಕ ಶೇಖ್ ಷಹಜಹಾನ್‌ನನ್ನ ಬಂಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಆದೇಶಿಸಿದೆ.

ಸ್ವಯಂಪ್ರೇರಿತ ಪ್ರಕರಣದಲ್ಲಿ ಟಿಎಂಸಿ ನಾಯಕ ಶಹಜಹಾನ್ ಅವರನ್ನುಇಡಿ, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಯೊಂದಿಗೆ ಕಕ್ಷಿದಾರರನ್ನಾಗಿ ಸೇರಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನಿರ್ದೇಶನ ನೀಡಿದ್ದಾರೆ.

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee), ನ್ಯಾಯಾಲಯವು ಪೊಲೀಸರ ಕೈಗಳನ್ನು ಕಟ್ಟಿಹಾಕಿದ ಕಾರಣ ಬಂಗಾಳ ಸರ್ಕಾರವು ಷಹಜಹಾನ್‌ನನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಕೋಲ್ಕತ್ತಾ ಹೈಕೋರ್ಟ್ ಬಂಧನಕ್ಕೆ ಆದೇಶಿಸಿದೆ.

ಲೈಂಗಿಕ ಕಿರುಕುಳ ಹಾಗೂ ಭೂಕಬಳಿಕೆ ಆರೋಪ ಹೊತ್ತಿರುವ ಪ್ರಮುಖ ಆರೋಪಿ ಶೇಖ್ ಷಹಜಹಾನ್‌ನನ್ನು (Sheikh Shahjahan) ಬಂಧಿಸದಂತೆ ಬಂಗಾಳ ಪೊಲೀಸರಿಗೆ (Bengal Police) ಯಾರೂ ಹೇಳಿಲ್ಲ. ಯಾವುದೇ ಹಂತದಲ್ಲೂ ಬಂಧನಕ್ಕೆ ಅಡೆತಡೆ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸುತ್ತದೆ. ಷಹಜಹಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಎಂದು ಹೆಸರಿಸಲಾಗಿದೆ. ಆದ್ದರಿಂದ ನಿಸ್ಸಂಶಯವಾಗಿ ಅವರನ್ನು ಬಂಧಿಸಬೇಕು ಎಂದು ಕೋರ್ಟ್ ಹೇಳಿದೆ.

ಶಹಜಹಾನ್ ಮತ್ತು ಅವರ ಸಹಚರರಿಂದ ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಮತ್ತು ಭೂಕಬಳಿಕೆ ಮಾಡಿದ್ದಾರೆ ಎಂದು ಟಿಎಂಸಿ ಪ್ರಭಾವಿ ವಿರುದ್ಧ ಆರೋಪಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಾನವ ಹಕ್ಕುಗಳ ಆಯೋಗ, ಸಂದೇಶ್‌ಖಾಲಿಯಲ್ಲಿ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನೂ ಕಳುಹಿಸಿತ್ತು. ಇದಾದ ನಂತರ ಷಹಜಹಾನ್ ಬಂಧನ ವಿಳಂಭಕ್ಕೆ ನ್ಯಾಯಾಲಯವೇ ಕಾರಣ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಬಂಧಿಸುವಂತೆ ತಿಳಿಸಿದೆ.

ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಕೋರ್ಟ್, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ ವರೆಗೆ 43 ಎಫ್‌ಐಆರ್‌ಗಳು ದಾಖಲಾಗಿವೆ. 42 ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇನ್ನೂ ಬುಡಕಟ್ಟು ಜನರ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 8 ರಿಂದ 26ರ ವರೆಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 24 ಪ್ರಕರಣಗಳು ದಾಖಲಾಗಿದೆ ಎಂಬುದನ್ನು ಪರಿಗಣಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸದೇ ಇರೋದಕ್ಕೆ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!