ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ಇದೀಗ ದೊಡ್ಡ ತಿರುವು ಪಡೆದಿದೆ.
ಈ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರಿಂದ ತೆಗೆದು ಕೇಂದ್ರ ತನಿಖಾ ದಳ (CBI)ಗೆ ಹಸ್ತಾಂತರಿಸಲಾಗಿದೆ.
ಮೇ 6ರಂದು ರಾತ್ರಿ ನಡೆದ ಈ ಘಟನೆ ರಾಜ್ಯದ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಆರಂಭದಲ್ಲಿ ವಿಶೇಷ ತನಿಖಾ ದಳ (SIT) ರಚಿಸಿ ತನಿಖೆ ನಡೆಸಲಾಗಿತ್ತು. ಆದರೆ ಪ್ರಕರಣದ ಸಂವೇದನಾಶೀಲತೆ ಮತ್ತು ರಾಜಕೀಯ ಹಿನ್ನೆಲೆಯನ್ನು ಗಮನಿಸಿ ಕೇಂದ್ರ ಮಟ್ಟದ ತನಿಖೆಗೆ ವಹಿಸಲಾಗಿದೆ.
ಇದನ್ನೂ ಓದಿ:
ಈ ನಡುವೆ ಪೊಲೀಸರು ಮೇ 11ರಂದು ಮೂವರು ಶಂಕಿತರನ್ನು ಬಂಧಿಸಿದ್ದು, ಡಿಜಿಟಲ್ ಸಾಕ್ಷ್ಯಗಳು ಮತ್ತು ಅಂತಾರಾಜ್ಯ ಸಂಪರ್ಕಗಳು ಪ್ರಕರಣ ಭೇದಿಸಲು ಸಹಾಯ ಮಾಡಿವೆ. ಆರೋಪಿಗಳು ಪರಾರಿಯಾಗುವ ವೇಳೆ ಟೋಲ್ ಪ್ಲಾಜಾದಲ್ಲಿ UPI ಮೂಲಕ ಪಾವತಿ ಮಾಡಿದ ಮಾಹಿತಿ ತನಿಖೆಗೆ ಪ್ರಮುಖ ಸುಳಿವು ನೀಡಿದೆ.
ಸಿಸಿಟಿವಿ ದೃಶ್ಯಗಳು ಮತ್ತು ಮೊಬೈಲ್ ಟ್ರ್ಯಾಕಿಂಗ್ ಆಧರಿಸಿ ಎಸ್ಐಟಿ ತಂಡವು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಸದ್ಯ ಅವರನ್ನು 13 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣ ಈಗ ಸಿಬಿಐ ತನಿಖೆಯಡಿ ಮುಂದುವರಿಯಲಿದೆ.



