ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಸ್ಥಳ ಮಹಜರು ವೇಳೆ ಮತ್ತೋರ್ವ ಆರೋಪಿಗೆ ಪೊಲೀಸರಿಂದ ಗುಂಡೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ರಾಜ್ಯವನ್ನೇ ಬೆಚ್ಚಿಬೀಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕರ್ನಾಟಕ- ಕೇರಳ ಗಡಿಭಾಗದ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾಗ ಆರೋಪಿ ಮುರುಗನ್ ಡಿ ದೇವರ್ ಕಾಲಿಗೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಗುಂಡು ಹೊಡೆದಿದ್ದಾರೆ.

ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುರುಗನ್ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಫೆ.3ರ ವರೆಗೆ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು.

ಬ್ಯಾಂಕ್ ದರೋಡೆಯ ತಿಂಗಳ ಹಿಂದೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಶಶಿ ತೇವರ್ , ಯೋಶುವ ರಾಜೇಂದ್ರನ್, ಮುರುಗನ್‌ ದೇವರ್ ತಂಡವು ಅಜ್ಜಿನಡ್ಕದ ಖಾಸಗಿ ನಿರ್ಜನ ಪ್ರದೇಶಕ್ಕೆ ಬಂದು ಪಿಸ್ತೂಲೊಂದನ್ನ ಬಚ್ಚಿಟ್ಟಿದ್ದರೆನ್ನಲಾಗಿದೆ. ಶಶಿ ತೇವರ್ ಸ್ಥಳೀಯನೆಂದು ಹೇಳಲಾಗುತ್ತಿದ್ದು, ದರೋಡೆ ಕೃತ್ಯದಲ್ಲಿ ಆತ ಪಾಲ್ಗೊಂಡಿರಲಿಲ್ಲ.

ಆ ಹಿನ್ನಲೆಯಲ್ಲಿ ಶಶಿ ತೇವರ್ ಬಚ್ಚಿಟ್ಟಿದ್ದ ಪಿಸ್ತೂಲನ್ನ ವಶಕ್ಕೆ ಪಡೆಯಲು ಇಂದು ಮಧ್ಯಾಹ್ನ ಸ್ಥಳ ಮಹಜರು ಉದ್ದೇಶಕ್ಕಾಗಿ ಮುರುಗನ್ ದೇವರನ್ನ ಅಜ್ಜಿನಡ್ಕ ಪ್ರದೇಶಕ್ಕೆ ಕರೆದೊಯ್ದಿದ್ದಾಗ ಪೊಲೀಸ್ ಕಾನ್ಸ್ ಟೇಬಲ್ ಮಂಜುನಾಥ್ ಎಂಬವರ ಮರ್ಮಾಂಗಕ್ಕೆ ಒದ್ದು ಮುರುಗನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.


ಕಾನ್ಸ್ ಟೇಬಲ್ ಮಂಜುನಾಥ್

ಈ ವೇಳೆ, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗಾಳಿಯಲ್ಲಿ ಫೈರಿಂಗ್ ಮಾಡಿದ್ದು, ಮುರುಗನ್ ಮತ್ತೂ ಓಡಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದಿದ್ದಾರೆ.

ಗಾಯಾಳು ಆರೋಪಿ ಮುರುಗನ್ ನನ್ನ ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!