ಹೊಸದಿಗಂತ ವರದಿ,ಬಳ್ಳಾರಿ:
ಸಹೋದರ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರಿಬ್ಬರೂ ಕೃಷ್ಣ ಅರ್ಜುನ ನಂತಿದ್ದರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೃಷ್ಣ ಸ್ವಲ್ಪ ನಮ್ಮಿಂದ ದೂರ ಆದ, ನಮಗೆ ಸ್ವಲ್ಪ ಎಫೆಕ್ಟ್ ಆಯಿತು, ಮತ್ತೆ ನಮ್ಮ ಕೃಷ್ಣ ತವರು ಪಕ್ಷಕ್ಕೆ ಬಂದಿದ್ದು, ನಮ್ಮ ಗೆಲುವಿನ ಓಟವನ್ನು ಮತ್ತೆ ಯಾರಿಂದಲೂ ತಡೆಯೋಕೆ ಆಗೋಲ್ಲ ಎಂದು ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ , ಶ್ರೀರಾಮುಲು ಎಲ್ಲರೂ ಸೇರಿ ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ, ಅಭ್ಯರ್ಥಿ ಬಿ.ಶ್ರೀರಾಮುಲು ಅತ್ಯಧಿಕ ಮತಗಳ ಅಂತರಗಳಿಂದ ಭರ್ಜರಿ ಗೆಲುವು ಸಾಧಿಸಲಿದ್ದಾರೆ, ಇದರಲ್ಲಿ ಅನುಮಾನವೇ ಬೇಡ. ಅಭ್ಯರ್ಥಿ ಶ್ರೀರಾಮುಲು ಅವರು, ಮೋದಿ ಅವರಿಗೆ ಅತ್ಯಂತ ಆಪ್ತರಾಗಿದ್ದು, ಅವಳಿ ಜಿಲ್ಲೆಯ ಅಭಿವೃದ್ದಿ ಕೆಲಸಗಳಿಗೆ ಶಕ್ತಿ ಬರಲಿದೆ. ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿ ಚಿತ್ರಣವೇ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರ ನೇತೃತ್ವದ ಜನಪರ ಆಡಳಿತ, ಅವಧಿಯಲ್ಲಿ ಎಲ್ಲ ವರ್ಗದವರಿಗೆ ಜಾರಿಗೊಳಿಸಿದ ಜನಪರ ಯೋಜನೆಗಳು, ದೇಶದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ದೇಶದ ಜನರು ಗಮನಿಸಿದ್ದಾರೆ, ಕಾಂಗ್ರೆಸ್ ನವರು ಎಸ್ಟೇ ತಿಪ್ಪರ್ ಲಾಗ್ ಹಾಕಿದರೂ ಅಧಿಕಾರಕ್ಕೆ ಬರೋಲ್ಲ, ನಮ್ಮ ಮೋದಿ ಅವರ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಕಮಲ ಅರಳಿದ್ದು, ಇದರಲ್ಲಿ ಅನುಮಾನವೇ ಬೇಡ, ಗಣಿನಾಡು ಬಳ್ಳಾರಿ ಎಸ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪರ ಕ್ಷೇತ್ರದ ಜನರ ಒಲವು ಹೆಚ್ಚಿದ್ದು, 1 ಲಕ್ಷಕ್ಕೂ ಹೆಚ್ಚು ಮತಗಳ ಅoತರಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.