ದಿಗಂತ ವರದಿ ಬಾಗಲಕೋಟೆ:
ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಬಳಸಿಕೊಳ್ಳವ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಾಯಿಂದ ಹೇಳಿಕೆ ನೀಡಿದ್ದು ನನಗೆ ಆಘಾತವಾಗಿದೆ ಎಂದು ಮಾಜಿ ಸಚಿವ ಎಸ್. ಆರ್.ಪಾಟೀಲ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ರಾಜ್ಯದ 28 ಸ್ಥಾನ ಗೆದ್ದರೆ ಕಾವೇರಿ ಭಾಗದ ಜಿಲ್ಲೆಗಳ ನೀರಿನ ಭವನೆ ಕಡಿಮೆ ಮಾಡಲು ಕೃಷ್ಣಾ ನದಿ ನೀರು ಬಳಸಿಕೊಳ್ಳಲು ಪ್ರಧಾನಿಯವರನ್ನು ಕೇಳೋಣ ಎಂದು ದೇವೇಗೌಡರು ಹೇಳಿಕೆ ನೀಡಿದ್ದು ಮನಸ್ಸಿಗೆ ತುಂಬಾ ಬೇಜಾರಾಗಿದೆ ಎಂದರು.
ಕೃಷ್ಣೆಯ ನೀರು ಬೇರೆ ಕಡೆ ಹೋದರೆ ಕೃಷ್ಣಾ ಭಾಗದ ಮಕ್ಕಳು ಅನಾಥರು, ಭಿಕಾರಿ ಆಗಲಿದ್ದಾರೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು .ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವ ಸ್ವಾಭಿಮಾನ ಎತ್ತುವ ಕೆಲಸ ಮಾಡಬೇಕು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ಮೂರು ಪೂರ್ಣಗೊಂಡರೆ 130 ಟಿಎಂಸಿ ನೀರು ಬಳಸಿದರೆ 15 ಲಕ್ಷ ಎಕರೆ ನೀರಾವರಿ ಆಗಲಿದೆ. 7 ಜಿಲ್ಲೆಗೆ ಅನುಕೂಲವಾಗಲಿದೆ.ಬೇರೆ ರಾಜ್ಯಕ್ಕೆ ರಾಜ್ಯದಿಂದ ನೀರ ಹರಿದುಹೋಗುತ್ತಿದೆ. ಆಲಮಟ್ಟಿ ಜಲಾಶಯ ಎತ್ತರಿಸಲು ಸರ್ಕಾರ ಮನಸ್ಸು ಮಾಡಬೇಕು ಎಂದರು.
ಕನ್ನಡಾಂಬೆಯ ಎರಡು ಕಣ್ಣು ಕಾವೇರಿ, ಕೃಷ್ಣಾ ಆಗಿದೆ. ಕಾವೇರಿ ಜಲಾಯನ ಪ್ರದೇಶಕ್ಕೆ ಕೃಷ್ಣಾ ನೀರು ಹೋದರೆ ಕೃಷ್ಣೆಯ ಮಕ್ಕಳ ಗತಿ ಏನು ಎಂದರು. ಕೃಷ್ಣಾ ನದಿನೀರನ್ನು ಒಯ್ಯತಿವಿ ಎಂದು ದೇವೇಗೌಡರು ಪ್ರಧಾನಮಂತ್ರಿ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕ ಜನ ಎಚ್ಚೆತ್ತುಕೊಳ್ಳಬೇಕು ಎಂದರು.