ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ರಾವಣನ ಪಾತ್ರದಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಈ ನಡುವೆ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಕೆಆರ್ಕೆ ಮಾಡಿರುವ ಟೀಕೆ ವಿವಾದಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೆಆರ್ಕೆ ಟೀಕೆ ಏನು?
ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಕೆಆರ್ಕೆ, ಯಶ್ ಅವರ ಅಭಿನಯ ಮತ್ತು ಹಿಂದಿ ಉಚ್ಚಾರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾವಣನಂತಹ ಪಾತ್ರಕ್ಕೆ ವಿಭಿನ್ನ ಧ್ವನಿ ಅಗತ್ಯವಿತ್ತು ಎಂದು ಅಭಿಪ್ರಾಯಪಟ್ಟ ಅವರು, ಬೇಕಿದ್ದರೆ ಹಿಂದಿ ಡಬ್ಬಿಂಗ್ ಬಳಸಬಹುದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಅಭಿಮಾನಿಗಳಿಂದ ತಿರುಗೇಟು
ಕೆಆರ್ಕೆ ಹೇಳಿಕೆಗೆ ಯಶ್ ಅಭಿಮಾನಿಗಳು ತಕ್ಷಣವೇ ಪ್ರತಿಕ್ರಿಯಿಸಿದ್ದು, ಭಾಷೆಗಿಂತ ಅಭಿನಯವೇ ಮುಖ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ನಟರಾಗಿರುವ ಕಾರಣ ಸಹಜವಾಗಿ ಉಚ್ಚಾರಣೆಯಲ್ಲಿ ವ್ಯತ್ಯಾಸ ಇರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು “ಕೆಆರ್ಕೆ ನೆಗೆಟಿವ್ ರಿವ್ಯೂ ಕೊಟ್ಟರೆ ಸಿನಿಮಾ ಹಿಟ್ ಆಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಕೆಲವು ನೆಟ್ಟಿಗರು ರಾವಣನ ಪಾತ್ರಕ್ಕೆ ಹಿಂದಿ ಡಬ್ಬಿಂಗ್ ಪರಿಗಣಿಸಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ.
‘ರಾಮಾಯಣ’ ಬಗ್ಗೆ
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅರುಣ್ ಗೋವಿಲ್, ಸನ್ನಿ ಡಿಯೋಲ್, ರವಿ ದುಬೆ, ರಾಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ, ವಿವೇಕ್ ಒಬೆರಾಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ‘ರಾಮಾಯಣ – ಭಾಗ 1’ 2026ರ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ.



