ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ದ್ ಕೃಷ್ಣ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 47.5 ಓವರ್ಗಳಲ್ಲಿ 270 ರನ್ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅರ್ಶದೀಪ್ ಸಿಂಗ್ ಮೊದಲ ಓವರ್ನಲ್ಲೇ ರಿಯನ್ ರಿಕಲ್ಟನ್ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಎರಡನೇ ವಿಕೆಟ್ಗೆ ನಾಯಕ ತೆಂಬಾ ಬವುಮಾ ಹಾಗೂ ಕ್ವಿಂಟನ್ ಡಿ ಕಾಕ್ 113 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ತೆಂಬಾ ಬವುಮಾ 48 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಬ್ರೆಟ್ಕೀ(24) ಹಾಗೂ ಏಯ್ಡನ್ ಮಾರ್ಕ್ರಮ್ ಅವರನ್ನು ಒಂದೇ ಓವರ್ನಲ್ಲಿ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಯಶಸ್ವಿಯಾದರು.
ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುತ್ತಿರುವ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಭಾರತ ಎದುರು ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು.
ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಡಿ ಕಾಕ್, ನಿರ್ಣಾಯಕ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಡಿ ಕಾಕ್ ಕೇವಲ 80 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 23ನೇ ಹಾಗೂ ಭಾರತದ ಎದುರು ಏಳನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಕ್ವಿಂಟನ್ ಡಿ ಕಾಕ್ 89 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 106 ರನ್ ಸಿಡಿಸಿ ಪ್ರಸಿದ್ದ್ಗೆ ಮೂರನೇ ಬಲಿಯಾದರು.
ಇನ್ನುಳಿದಂತೆ ಡೆವಾಲ್ಡ್ ಬ್ರೆವೀಸ್(29) ಹಾಗೂ ಮಾರ್ಕೊ ಯಾನ್ಸನ್(17) ಒಂದೇ ಓವರ್ನಲ್ಲಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಕೇಶವ್ ಮಹರಾಜ್ 20 ರನ್ ಗಳಿಸಿ ಅಜೇಯರಾಗುಳಿದರು.

