ಹೊಸದಿಗಂತ ಡಿಜಿಟಲ್ ಡೆಸ್ಕ್
ವಾಖೆಂಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 3ರನ್ ಗಳ ರೋಚಕ ಜಯ ಒಲಿಸಿಕೊಂಡಿತು.
ಕೊನೆಯ ಎಸೆತದ ವರೆಗೂ ತೀವ್ರ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ರಾಜಸ್ಥಾನ ರಾಯಲ್ಸ್ ತಂಡ ನೀಡಿದ 166 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ಗೆಲುವಿಗೆ ಅಂತಿಮ ಓವರ್ ನಲ್ಲಿ 15 ರನ್ ಗಳ ಅಗತ್ಯವಿತ್ತು. ಈ ಹಂತದಲ್ಲಿ ತಂಡ 8 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಕ್ರೀಸ್ ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಆವೇಶ್ ಖಾನ್ ಅವರಿದ್ದರು. ಕೊನೆ ಆರು ಎಸೆತಗಳನ್ನು ಎಸೆದ ಕುಲ್ದೀಪ್ ಸೇನ್ ೧೧ ರನ್ ಮಾತ್ರವೇ ನೀಡಿ ರಾಜಸ್ತಾನ್ ತಂಡಕ್ಕೆ ವಿಜಯಮಾಲೆಯನ್ನು ತೊಡಿಸಿ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಲಖನೌ ನಾಯಕ ಕೆ.ಎಲ್. ರಾಹುಲ್ (0), ಕೃಷ್ಣಪ್ಪ ಗೌತಮ್ (0), ಜೇಸನ್ ಹೋಲ್ಡರ್ (8) ಹಾಗೂ ಆಯುಷ್ ಬಡೋನಿ (5) ಕೇವಲ ಒಂದಕ್ಕಿ ಮೊತ್ತಕ್ಕೆ ಔಟ್ ಆಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. 3.3 ಓವರ್ ಗಳಲ್ಲಿ 13 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕ್ವಿಂಟನ್ ಡಿ ಕಾಕ್ 39, ದೀಪಕ್ ಹೂಡಾ 25 ಹಾಗೂ ಕೃಣಾಲ್ ಪಾಂಡ್ಯ 22 ರನ್ ಗಳಿಸಿ ಚೇತರಿಕೆ ನೀಡಿದರು. ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ (38) ಅಬ್ಬರಿಸಿದರೂ ತಂಡವನ್ನು ಗೆಲುವಿನ ಗೆರೆ ದಾಟಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಲಖನೌ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಕೇವಲ 3 ರನ್ ಗಳ ಅಂತರದಿಂದ ವಿರೋಚಿತ ಸೋಲು ಕಂಡಿತು. ಆಕರ್ಷಕ ಬೌಲಿಂಗ್ ದಾಳಿನಡೆಸಿದ ಸ್ಪಿನ್ನರ್ ಚಾಹಲ್ 4 ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡವು ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ ಅರ್ಧಶತಕ (59) ಹಾಗೂ ಬೌಲರ್ಗಳ ಬಿಗಿ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ತಂಡವು 67 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಐದನೇ ವಿಕೆಟ್ಗೆ ಶಿಮ್ರಾನ್ ಹೆಟ್ಮೆಯರ್ ಹಾಗೂ ರವಿಚಂದ್ರನ್ ಅಶ್ವಿನ್ ಉತ್ತಮ ಜೊತೆಯಾಟವಾಡೆಉವ ಮೂಲಕ ತಂಡ ಸ್ಪರ್ಧಾತ್ಮಕ ಗುರಿ ತಲುಪುವಂತೆ ನೋಡಿಕೊಂಡರು. ಲಖನೌ ಪರ ಸ್ಪಿನ್ನರ್ ಗಳಾದ ರವಿ ಬಿಷ್ಣೋಯಿ ಹಾಗೂ ಕೆ.ಗೌತಮ್ ತಲಾ 2 ವಿಕೆಟ್ ಕಬಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ