ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸುವಂತೆ ಜೆಡಿಎಸ್ ಮುಂದಿಟ್ಟಿದ್ದ ಬೇಡಿಕೆಯನ್ನು ಸರ್ಕಾರ ನಿರಾಕರಿಸಿದೆ.
ಸದನದಲ್ಲಿ ಬಿಎಂಎಸ್ ಟ್ರಸ್ಟ್’ಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ತಿದ್ದುಪಡಿಯೊಂದನ್ನು ವಿರೋಧಿಸಿ ಎಚ್ ಡಿ ಕುಮಾರಸ್ವಾಮಿ ಗುರುವಾರವೇ ಸದನದಲ್ಲಿ ಧ್ವನಿ ಮೊಳಗಿಸಿದ್ದರು. ಈ ವಿಚಾರ ಶುಕ್ರವಾರವೂ ವಿಧಾನಸಭೆಯಲ್ಲಿ ಮುಂದುವರಿಯಿತಲ್ಲದೇ ಜೆಡಿಎಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು.
ತಿದ್ದುಪಡಿ ಮೂಲಕ ಸರ್ಕಾರ ಒಬ್ಬ ವ್ಯಕ್ತಿಗೆ ಟ್ರಸ್ಟ್ನ್ನು ಪರಭಾರೆ ಮಾಡಿದಂತಾಗಿದೆ. ಸಾರ್ವಜನಿಕ ಟ್ರಸ್ಟ್ ಒಂದು ಕುಟುಂಬಕ್ಕೆ ವರ್ಗಾವಣೆ ಆಗುತ್ತಿದೆ. ಸಚಿವ ಅಶ್ವಥ್ನಾರಾಯಣ ಈ ಅವ್ಯವಹಾರಕ್ಕೆ ಸಹಕರಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂಬುದುದು ಜೆಡಿಎಸ್ ಆರೋಪ.
ಸುಪ್ರೀಂಕೋರ್ಟ್ ವರೆಗಿನ ನ್ಯಾಯಾಂಗ ಕದನವನ್ನು ಟ್ರಸ್ಟಿಗಳು ಗೆದ್ದ ನಂತರವೇ, ಕಾನೂನು ಸಲಹೆ ಪಡೆದು ತಿದ್ದುಪಡಿಗೆ ಅನುವು ಮಾಡಲಾಗಿದೆ. ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ತಿದ್ದುಪಡಿ ನಂತರ ಸರ್ಕಾರದ ನಿಯಂತ್ರಣ ತಪ್ಪುವುದಾಗಲೀ, ಭೂಮಿ ಬೇರೆ ಉದ್ದೇಶಕ್ಕೆ ಬಳಕೆ ಆಗುವುದಾಗಲೀ ಆಗುವುದಿಲ್ಲ ಎಂಬುದು ಸಚಿವ ಅಶ್ವತ್ಥ್ ನಾರಾಯಣ್ ಉತ್ತರವಾಗಿತ್ತು.
ಶುಕ್ರವಾರ ಸದನದ ಕಲಾಪಗಳ ಮುಕ್ತಾಯದ ನಂತರ ಪತ್ರಿಕಾಗೋಷ್ಟಿ ನಡೆಸಿದ ಕುಮಾರಸ್ವಾಮಿ, ಈ ವಿಷಯದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.