ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯ ಟೆರೇಸ್ ನಲ್ಲಿಯೇ ನಿಷೇಧಿತ ಗಾಂಜಾ ಗಿಡ ಬೆಳೆಸಿದ ಪ್ರಕರಣವೊಂದನ್ನು ಕಾಸರಗೋಡಿನ ಕುಂಬಳೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದಾನೆ ಎನ್ನಲಾದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಬಂಧಿತ ವಿದ್ಯಾರ್ಥಿ ಬೇಕೂರು ಕನ್ನಡಿ ಪಾರೆಯ ನಿವಾಸಿಯಾಗಿದ್ದಾನೆ.
ಆರೋಪಿಯು ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಇದರ ಟೆರೇಸ್ ನಲ್ಲಿ 20 ಲೀಟರ್ ನೀರಿನ ಬಾಟಲಿಯ ಮೇಲ್ಭಾಗ ವನ್ನು ಕತ್ತರಿಸಿ ಮಣ್ಣು ತುಂಬಿಸಿ ಅದರಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಇದನ್ನು ಸ್ವಂತಕ್ಕೆ ಬಳಸುತ್ತಿದ್ದ ಅಲ್ಲದೆ, ಮಾರಾಟವನ್ನೂ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ಗಾಂಜಾ ಬೀಜಗಳನ್ನು ಎಲ್ಲಿಂದ ತಂದಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.