ಹೊಸದಿಗಂತ ವರದಿ ಶಿವಮೊಗ್ಗ:
ಜಿಲ್ಲೆಯಲ್ಲಿ ಸದ್ಯಕ್ಕೆ ಮೇವು ಮತ್ತು ನೀರಿನ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ 238 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರ ಸಂಬಂಧ ಜಿಲ್ಲಾ ಪ್ರವಾಸ ನಡೆಸಿ ನವೆಂಬರ್ 15ರೊಳಗೆ ವರದಿ ನೀಡುವಂತೆ ಸಿಎಂ ಸೂಚಿಸಿದ್ದರು. ಅದರಂತೆ ಭದ್ರಾವತಿ ಹಾಗೂ ಶಿಕಾರಿಪುರ ಹೊರತುಪಡಿಸಿ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿ ವರದಿ ಸಿದ್ದಪಡಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ಪ್ರವಾಸ ಮಾಡಲಾಗುತ್ತದೆ ಎಂದರು.
ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ರೈತರಿಗೆ 7 ತಾಸು ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಕೊರತೆ ಇಲ್ಲ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ತಾಂತ್ರಿಕವಾಗಿ ಕೆಲವು ಕಡೆಗಳಲ್ಲಿ ಅಡಚಣೆಯಾಗುತ್ತಿದೆ ಎಂದು ತಿಳಿಸಿದರು.
ಸೊರಬ ಹಾಗೂ ಆನವಟ್ಟಿಯಲ್ಲಿ ಎರಡು ಕಡೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದನ್ನು ಬಿಟ್ಟರೆ ಕುಡಿಯುವ ನೀರಿನ ಕೊರತೆ ಎಲ್ಲಿಯೂ ಇಲ್ಲ ಎಂದರು.
ಬರದಿಂದ 17 ಸಾವಿರಕೋಟಿ ರಾಜ್ಯದಲ್ಲಿ ನಷ್ಟವಾಗಿದೆ ಎಂದು ಸಿಎಂ ಕೇಂದ್ರಕ್ಕೆ ವರದಿ ನೀಡಿದ್ದಾರೆ. ಆದರೆ ಕೇಂದ್ರ ಸಚಿವರು ರಾಜ್ಯದ ಬರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಕಡತಗಳನ್ನು ನೋಡುತ್ತಿಲ್ಲ ಎಂದು ದೂರಿದರು.