ಹೊಸದಿಗಂತ ವರದಿ ಅಂಕೋಲಾ:
ಇತ್ತೀಚೆಗೆ ತುಮಕೂರಿನ ಶಿರಾ ಬಳಿ ಕಾರಿನಲ್ಲಿ ನಾಡ ಬಾಂಬ್ ಸ್ಫೋಟಗೊಳಿಸಿ ತಾಲೂಕಿನ ಹೆಬ್ಬುಳ ರಾಜಗುಳಿಯ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೂರು ಪ್ರತ್ಯೇಕ ತಂಡಗಳು ತನಿಖಾ ಕಾರ್ಯವನ್ನು ತೀವ್ರಗೊಳಿಸಿದ್ದು, ಈಗಾಗಲೇ ಮೃತ ಯುವಕ ನಾಗೇಂದ್ರ ಗೌಡ ಸಂಪರ್ಕದಲ್ಲಿದ್ದ ಸುಮಾರು 50 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎನ್ನಲಾದ ಕೆಲವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಮೃತ ನಾಗೇಂದ್ರನಿಗೆ ನಾಡ ಬಾಂಬ್ ಎಲ್ಲಿಂದ ದೊರಕಿದೆ ಎನ್ನುವ ಕುರಿತಂತೆ ತನಿಖೆ ತೀವ್ರಗೊಂಡಿದ್ದು ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ ಅಂಕೋಲಾ ಮೂವರು ಮತ್ತು ಹೊನ್ನಾವರ ಚಂದಾವರದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಡಬಾಂಬ್ ಬಳಸಿ ಕಾನೂನು ಬಾಹಿರವಾಗಿ ಮೀನು ಹಿಡಿಯುವ ಕಾರ್ಯ ಜೋರಾಗಿದೆ ಎಂದು ಹೇಳಲಾಗುತ್ತಿದ್ದು ಹೆಬ್ಬುಳದ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಗಂಗಾವಳಿ ನದಿಯಲ್ಲೂ ನಾಡ ಬಾಂಬ್ ಸ್ಪೋಟಿಸಿ ಹೊಳೆ ಮೀನು ಹಿಡಿದು ಮಾರಾಟ ಮಾಡಿ ಹಣಗಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಬಾಂಬ್ ಹಾಕಿ ನದಿಯಲ್ಲಿ ಮೀನು ಹಿಡಿಯುವವರ ಸಂಪರ್ಕದಿಂದ ನಾಗೇಂದ್ರ ನಾಡ ಬಾಂಬುಗಳನ್ನು ಖರೀದಿಸಿದನೇ ಎನ್ನುವ ದಿಶೆಯಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ. ಅದಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲೇ ನಾಡಬಾಂಬುಗಳನ್ನು ತಯಾರಿಸಿ ಮೀನು ಹಿಡಿಯುವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ತಿಳಿದುಬಂದಿದ್ದು ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ತಯಾರಿಸಲಾದ ಸ್ಪೋಟಕಗಳನ್ನು ನಾಗೇಂದ್ರ ಅಂಕೋಲಾದಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಸಾಗಿಸಿದ್ದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಲವಡೆ ಓಡಾಟ ನಡೆಸಿರುವುದು ಆತಂಕಕಾರಿ ಸಂಗತಿಯಾಗಿದ್ದು ಸಾರ್ವಜನಿಕ ಸುರಕ್ಷತೆಗೆ ಸಾಕಷ್ಟು ಅಪಾಯ ಎದುರಾಗುವಂತ
ಪ್ರಕರಣವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.



