ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ಧರಿಸದಿರುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬುದಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆಯನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಹಿಜಾಬ್,ಬುರ್ಕಾ ಧರಿಸಿದ ಮಹಿಳೆ,ಮಕ್ಕಳ ಮೇಲೆ ಧಾರ್ಮಿಕ ಶಿಕ್ಷಣ ಕಲಿಸುವ ಮದ್ರಸಾಗಳಲ್ಲೇ ಲೈಂಗಿಕವಾಗಿ ಶೋಷಣೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು,ಜಮೀರ್ ಅಹ್ಮದ್ ಅವರು ಈ ಬಗ್ಗೆ ಧ್ವನಿ ಎತ್ತಿ ಶೋಷಿತರ ಪರವಾಗಿ ಹೋರಾಟ ಮಾಡಿದ್ದಾರಾ ಎಂದು ಡಾ.ಭರತ್ ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.
ಮಹಿಳೆಯರನ್ನು ಭೋಗದ ವಸ್ತು ಎಂಬಂತೆ ಭಾವಿಸುವ ಮಾನಸಿಕತೆ ಹೊಂದಿರುವ ಮತಾಂಧ ಶಕ್ತಿಗಳು ದರ್ಪದಿಂದ ಮಹಿಳೆಯರು ಹಿಜಾಬ್, ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿರುವುದನ್ನು ನೋಡಿದರೆ ಅವರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ಈಗಾಗಲೇ ಅನೇಕ ಮುಸ್ಲಿಂ ಮಹಿಳೆಯರು ಮತ್ತು ಪ್ರಜ್ಞಾವಂತರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಹೆಣ್ಣುಮಕ್ಕಳಿಗೂ ಸ್ವತಂತ್ರವಾಗಿ ಚಿಂತಿಸಿ ಬಾಳುವ ಹಕ್ಕಿದೆ ಎಂಬುದನ್ನು ಅರ್ಥಮಾಡಿಕೊಂಡು ಅವರ ಮೇಲೆ ನಂಬಿಕೆ, ಗೌರವ ಇಟ್ಟು ಅವರನ್ನು ಮುಖ್ಯವಾಹಿನಿಗೆ ಬರಲು ಸಹಕರಿಸುವುದನ್ನು ಬಿಟ್ಟು ಒಬ್ಬ ಶಾಸಕರಾಗಿ ಇಂತಹ ಹೇಳಿಕೆ ನೀಡಿರುವುದು ಆಘಾತಕಾರಿ ಎಂದು ಅವರು ಹೇಳಿದ್ದಾರೆ .
ತ್ರಿವಳಿ ತಲಾಖ್ ರದ್ದುಗೊಳಿಸಿದಾಗ ಮುಸ್ಲಿಂ ಮಹಿಳೆಯರು ಅದನ್ನು ಸ್ವಾಗತಿಸಿದರೆ ನೀವು ಇದನ್ನು ವಿರೋಸಿದ್ದು ಯಾಕೆ ?ಸಂವಿಧಾನಿಕ ಶಿಸ್ತು ಪಾಲಿಸಿ ಜೀವನ ನಡೆಸಲು ಇಲ್ಲಿ ಯಾರಿಗೂ ಯಾವ ಸಮಸ್ಯೆಯೂ ಇಲ್ಲ. ಇಲ್ಲಿ ಎಲ್ಲರಿಗೂ ಅವಕಾಶವಿದೆ.ಹಿಜಾಬ್ ಪ್ರಕರಣ ನ್ಯಾಯಲಯದಲ್ಲಿರುವಾಗ ಶೋಷಣೆಗೆ ಕುಮ್ಮಕ್ಕು ನೀಡುವಂತಹ, ಜಮೀರ್ ಅವರ ಇಂತಹ ಹೇಳಿಕೆಯನ್ನು ಖಂಡಿಸುವುದಾಗಿ ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಯು.ಟಿ ಖಾದರ್ ಅವರು ಕೂಡ ಒಂದೆಡೆ ಸೌಹಾರ್ದದ ಮಂತ್ರ ಜಪಿಸುತ್ತಾ , ಇನ್ನೊಂದೆಡೆ ಸಂವಿಧಾನಕ್ಕೆ ಬೆಲೆ ನೀಡದೆ ಶರಿಯತ್ ಸಂಪ್ರದಾಯವನ್ನು ಬೆಂಬಲಿಸಿ ಅಲ್ಪಸಂಖ್ಯಾತ ಮಹಿಳೆಯ ಶೋಷಣೆಗೆ ಬೆಂಬಲ ನೀಡುತ್ತಿದ್ದಾರೆ.ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತಿದೆ ಎಂಬುದಾಗಿ ಡಾ.ಭರತ್ ಶೆಟ್ಟಿ ಹೇಳಿಕೆಯೊಂದರಲ್ಲಿ ಟೀಕಿಸಿದ್ದಾರೆ.