ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 24ನೇ ಎಸಿಎಂ ನ್ಯಾಯಾಲಯಕ್ಕೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ.
ಮೃತ ಜೀವಾಗೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಯವರು ವಕೀಲೆ ಜೀವಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬುವುದು ಎಸ್ಐಟಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ತನಿಖೆ ವೇಳೆ ಚಿತ್ರೀಕರಿಸಿದ ವಿಡಿಯೋ, ಎಫ್ಎಸ್ಎಲ್ ವರದಿ ಎಲ್ಲವೂ ಚಾರ್ಜ್ಶೀಟ್ನೊಂದಿಗೆ ಲಗ್ಗತ್ತಿಸಲಾಗಿದೆ.
ಜೀವಾ ಆತ್ಮಹತ್ಯೆ ತನಿಖೆಗೆ ಹೈಕೋರ್ಟ್ ಎಸ್ಐಟಿ ರಚನೆ ಮಾಡಿತ್ತು. ಸಿಬಿಐ ಎಸ್ಪಿ ವಿನಾಯಕ್ ವರ್ಮ, ಸಿಸಿಬಿ ಡಿಸಿಪಿ ಅಕ್ಷಯ್ ಮಚ್ಚೀಂದ್ರ, ISD ಎಸ್ ಪಿ ನಿಶಾ ಜೇಮ್ಸ್ ಒಳಗೊಂಡ ಎಸ್ಐಟಿ ತಂಡ ರಚನೆಯಾಗಿತ್ತು. ತನಿಖೆ ನಡೆಸಿ 90 ದಿನದಲ್ಲಿ ಎಸ್ಐಟಿ ಹೈಕೋರ್ಟಿಗೆ ವರದಿ ಸಲ್ಲಿಸಿತ್ತು.
ಎಸ್ಐಟಿ ಅಧಿಕಾರಿಗಳ ತನಿಖೆಗೆ ನಿಮ್ಹಾನ್ಸ್ ಆಸ್ಪತ್ರೆಯ ಫಾರೆನ್ಸಿಕ್ ಸೈಕಾಲಾಜಿಕಲ್ ಆಟೋಫೇಸಿ ವಿಭಾಗದ ವೈದ್ಯೆ ಡಾ.ರಾಜಕುಮಾರಿ ಮತ್ತು ಅವರ ತಂಡ ಸಾಥ್ ನೀಡಿದೆ. ಭೋವಿ ನಿಗಮ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾಗ ರೆಕಾರ್ಡ್ ಮಾಡಿದ್ದ 30 ವಿಡಿಯೋಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಈ ವಿಡಿಯೋಗಳನ್ನು ವೈದ್ಯರು ಪರಿಶೀಲನೆ ನಡೆಸಿದ್ದು, ವಕೀಲೆ ಜೀವಾ ಖಿನ್ನತೆ, ಕಿರುಕುಳ, ಮೆಂಟಲ್ ಸ್ಟೇಬಲ್ ಬಗ್ಗೆ ಅಧ್ಯಯನ ಮಾಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ಮುಖಭಾವ ಹೇಗಿತ್ತು? ಎಷ್ಟು ಖಿನ್ನತೆಗೆ ಒಳಗಾಗಿದ್ದರು? ಸಿಐಡಿ ವಿಚಾರಣಗೆ ಬಂದು ಹೋಗಿದ್ದ ಸಿಸಿಟಿವಿ ವಿಡಿಯೋ, ಜೀವಾ ಬರೆದ ಡೆತ್ ನೋಟ್, ಜೀವಾ ನೀಡಿದ್ದ ವಿಡಿಯೋ ಹೇಳಿಕೆಗಳು ಮತ್ತು ಜೀವಾರ ಸ್ನೇಹಿತರ ಹೇಳಿಕೆ ಹಾಗೂ ಅವರ ಮನೆ ಬಳಿ ಹೀಗೆ ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಿ ವೈದ್ಯರು ವರದಿ ಸಿದ್ದಪಡಿಸಿ, ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.
ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಜೀವ ಆತ್ಮಹತ್ಯೆ ಮಾಡಿಕೊಂಡಿದ್ದರು. 2024 ನವೆಂಬರ್ 22ರಂದು ಮನೆಯಲ್ಲಿ ಜೀವ ಆತ್ಮಹತ್ಯೆ ಮಾಡಿಕೊಂಡಿದ್ದರು. Dysp ಕನಕಲಕ್ಷ್ಮಿ ಕಿರುಕುಳದ ಬಗ್ಗೆ ಹದಿಮೂರು ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.