ಹೊಸದಿಗಂತ ವರದಿ,ಕಲಬುರಗಿ:
ನಗರದ ಸಾಯಿ ಮಂದಿರ ಬಳಿಯಿರುವ ಅಪಾರ್ಟ್ಮೆಂಟ್ವೊಂದರ ಬಳಿ ಹಾಡುಹಗಲೇ ಈರಣ್ಣಾಗೌಡ ಪಾಟೀಲ್ ಎಂಬ ವಕೀಲನ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್ ತಿಳಿಸಿದರು.
ಶುಕ್ರವಾರ ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀನು ವಿಚಾರದಲ್ಲಿ ಸಂಬಂಧಿಕರಿಂದಲೇ ಹಲ್ಲೆಗೊಳಗಾದ ಈರಣ್ಣಾಗೌಡ ಪಾಟೀಲ್ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳಾದ ಮಲ್ಲಿನಾಥ್ ಉದನೂರ (45), ಭಾಗಣ್ಣ ತಂದೆ ಅವಣಪ್ಪ ಉದನೂರ್( 20), ಅವಣಪ್ಪ ತಂದೆ ಭಾಗವಂತರಾವ್ ಉದನೂರ (48) ಎಂಬುವ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು.
ಆರೋಪಿಗಳ ಪತ್ತೆಗಾಗಿ ಎರಡು ತಂಡಗಳ ರಚನೆ ಮಾಡಲಾಗಿತ್ತು.ಅದರಂತೆ ನಮ್ಮ ತಂಡಗಳ ತೀವ್ರ ಶೋಧನೆಯಿಂದ ಶುಕ್ರವಾರ ಮಧ್ಯರಾತ್ರಿ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಿ,ಮತ್ಯಾರಾದರೂ ಈ ಹಲ್ಲೆಯಲ್ಲಿ ಭಾಗಿಯಾಗಿದ್ದರೆ, ಅಂತವರನ್ನು ಬಂಧನ ಮಾಡಲಾಗುವುದು ಎಂದು ಹೇಳಿದರು.
ಹಲ್ಲೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು.