ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರೇ ಗೆಲ್ತಾರೆಂದು ಜನರು ಹೇಳುತ್ತಿದ್ದಾರೆ. ಡಾ.ಮಂಜುನಾಥ್ ಅವರ ಬಗ್ಗೆ ಒಂದೇ ಒಂದು ಆಪಾದನೆ ಕಾಂಗ್ರೆಸ್ ಅವರು ತೋರಿಸಲಿ ಎಂದು ಡಿಕೆ ಬ್ರದರ್ಸ್ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಇಂದು ಬೀದರ್ ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಡಿ.ಕೆ.ಸುರೇಶ್ ಒಬ್ಬ ರೌಡಿ ಅಂತ ಮಾತನಾಡುತ್ತಾರೆ. ಡಿಕೆ ಸಹೋದರರು ದೇಶ ನಾಶದ ಬಗ್ಗೆ ಮಾತನಾಡುತ್ತಾರೆ. ಅಂತಹವರನ್ನು ಜನರು ಒಪ್ಪುವುದಿಲ್ಲ. ದೇಶವನ್ನು ಹಾಳು ಮಾಡುವವರನ್ನು ತಿರಸ್ಕರಿಸಲು ಜನರು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನವಿದ್ದು, ಈ ಬಾರಿಯೂ ಕಷ್ಟವಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಕಳೆದ 10 ವರ್ಷಗಳಿಂದ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಕಲ್ಲಿದ್ದಲು, 2ಜಿ ಮತ್ತು 3ಜಿ ವಲಯದಲ್ಲಿ ಹಲವು ಹಗರಣಗಳು ನಡೆದಿವೆ.
ಹಾಗಾಗಿ ದೇಶಕ್ಕೆ ಕಾಂಗ್ರೆಸ್ ಅಗತ್ಯವಿಲ್ಲ. ದೇಶಕ್ಕೆ ಮೋದಿ ಬೇಕು ಎಂದು ಜನ ಹೇಳುತ್ತಾರೆ. ಕಳೆದ ಬಾರಿ ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಈಗ ನಮ್ಮ ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು-ಜೇನು ಇದ್ದಂತೆ. ಹೀಗಾಗಿ ಕಾಂಗ್ರೆಸ್ ಮಟ್ಟ ಹಾಕಲು ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲಾ ಸಭೆಗಳಲ್ಲೂ ಜೆಡಿಎಸ್ ಪಕ್ಷದವರು ಹೆಚ್ಚಿನ ಸಂಖ್ಯೆ ಕಾಣಿಸುತ್ತಿದ್ದಾರೆ ಎಂದರು.