ಮತಾಂತರಗೊಂಡ ಗಿರಿಜನರನ್ನು ಎಸ್‍ಟಿ ಪಟ್ಟಿಯಿಂದ ಕೈ ಬಿಡಿ: ಗಿರಿಜನ ಸುರಕ್ಷಾ ವೇದಿಕೆ ಒತ್ತಾಯ

ಹೊಸದಿಗಂತ ವರದಿ, ಕೊಡಗು:

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮತಾಂತರ ಪಿಡುಗು ಹೆಚ್ಚಾಗುತ್ತಿದ್ದು, ಮತಾಂತರಗೊಂಡಿರುವ ಗಿರಿಜನರನ್ನು ಎಸ್‍ಟಿ ಪಟ್ಟಿಯಿಂದ ಕೈಬಿಡುವ ಮೂಲಕ ಸರ್ಕಾರದ ಸೌಲಭ್ಯಗಳ ಲಭ್ಯತೆಯನ್ನು ರದ್ದುಗೊಳಿಸಬೇಕೆಂದು ಗಿರಿಜನ ಸುರಕ್ಷಾ ವೇದಿಕೆಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ಭೇಟಿಯಾದ ವೇದಿಕೆಯ ಪ್ರಮುಖರು, ಕುಶಾಲನಗರದಲ್ಲಿ ಜಿಲ್ಲೆಯ ವಿವಿಧ ಹಾಡಿ ಪ್ರಮುಖರ ಸಭೆ ನಡೆಸಿ ಮತಾಂತರದ ವಿರುದ್ಧ ಕೈಗೊಂಡ ನಿರ್ಣಯಗಳ ಮಾಹಿತಿಯನ್ನು ವಿವರಿಸಿದರು. ಅಲ್ಲದೆ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಮತಾಂತರಗೊಂಡ ಗಿರಿಜನ ವ್ಯಕ್ತಿಗಳು ತಮ್ಮ ಮೂಲ ಸಂಸ್ಕೃತಿ, ಪೂಜಾ ವಿಧಿ, ವಿಧಾನಗಳನ್ನು ತ್ಯಜಿಸುವುದರಿಂದ ಎಸ್.ಟಿ ಸೌಲಭ್ಯದ ಹಕ್ಕು ಕಳೆದುಕೊಳ್ಳುತ್ತಾರೆ. ಈ ಕಾನೂನು ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಮತಾಂತರಗೊಂಡಿರುವ ಗಿರಿಜನರನ್ನು ಎಸ್.ಟಿ ಪಟ್ಟಿಯಿಂದ ಕೈಬಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆಮಿಷವೊಡ್ಡಿ, ಬಲವಂತದ ಮತಾಂತರ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.
ಮುಂದಿನ ಜನಗಣತಿ ಸಂದರ್ಭ ಗಿರಿಜನರಿಗೆ ಪ್ರತ್ಯೇಕ ಕೋಡ್’ನಡಿ ಗಿರಿಜನರು ಎಂದು ದಾಖಲಿಸಿಕೊಳ್ಳುವುದರ ಬದಲು ಹಿಂದೂ ಎಂದು ದಾಖಲಿಸಿಕೊಳ್ಳಬೇಕು. ಅವರವರ ಧರ್ಮವನ್ನು ದಾಖಲಿಸಿಕೊಳ್ಳುವ ವ್ಯವಸ್ಥೆ ಇರಬೇಕೇ ಹೊರತು ಜಾತಿ ದಾಖಲೀಕರಣಕ್ಕೆ ಅವಕಾಶ ನೀಡಬಾರದು ಎಂದರು.
ಸಾಂಪ್ರದಾಯಿಕ ಗಿರಿಜನರ ಪಟ್ಟಿಗೆ (ಪ್ರೇಮಿಟಿಯು ಟ್ರೈಬ್ ಪಟ್ಟಿಗೆ) ಕಾಡು ಕುರುಬ, ಯರವ, ಸೋಲಿಗ, ಕುಡಿಯ ಜನ ಜಾತಿ ಸಮುದಾಯಗಳನ್ನು ಸೇರಿಸಬೇಕೆಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!