ಹೊಸದಿಗಂತ ಮಂಗಳೂರು:
ಮನೆಯ ಜಗಲಿ ಮೇಲೆ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು, ಈ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಿಹಾರ ಮೂಲದ ಸುರೇಂದ್ರ (೫೫) ಗಾಯಗೊಂಡವರಾಗಿದ್ದು, ಇವರು ನದಿಯಲ್ಲಿ ಮರಳುಗಾರಿಕೆ ನಡೆಸುವ ವೃತ್ತಿ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ಇವರು ಮನೆಯೊಂದರ ವರಾಂಡದಲ್ಲಿ ಮಲಗಿದ್ದ ಸಂದರ್ಭ ಚಿರತೆ, ಮುಖದ ಭಾಗಕ್ಕೆ ತೀವ್ರ ರೀತಿಯಲ್ಲಿ ಗಾಯಗೊಳಿಸಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಇಲ್ಲಿನ ಕಲ್ಲೊಟ್ಟು, ಸೊರ್ಪು, ಆಗೋಳಿಬೈಲು, ಪದವು ಮೊದಲಾದ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಸಂಚಾರವಿದೆ ಎನ್ನಲಾಗುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಕಲ್ಲೊಟ್ಟು ಪರಿಸರದ ಮನೆಯಿಂದ ಎರಡು ಸಾಕು ನಾಯಿಗಳನ್ನು ಚಿರತೆ ಬೇಟೆಯಾಡಿದೆ.