ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ 10ನೇ ಮೈಲ್ ಕುಂಜತ್ಕಲ ಪರಿಸರದಲ್ಲಿ ಚಿರತೆಯೊಂದರ ಓಡಾಟ ಕಂಡುಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶನಿವಾರ ರಾತ್ರಿ 11:30ರ ಸುಮಾರಿಗೆ ರಫೀಕ್ ಎಂಬವರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಫರಂಗಿಪೇಟೆ ಸಮೀಪದ ಟೆನ್ತ್ ಮೈಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿರತೆ ಇರುವುದು ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅವರು ಅಲ್ಲೇ ಸಮೀಪದ ಹೊಟೇಲ್ ಒಂದರಲ್ಲಿ ವಿಷಯ ತಿಳಿಸಿ ತೆರಳಿದ್ದು ಸ್ಥಳೀಯರು ರಾತ್ರಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ಟೆನ್ತ್ ಮೈಲ್ ಪಕ್ಕದ ಕುಂಜತ್ಕಲ ಅಂಗನವಾಡಿಯ ಹಿಂಬದಿಯ ಗುಡ್ಡೆಯಲ್ಲಿ ಚಿರತೆ ಕಂಡು ಬಂದಿದೆ ಎಂಬ ಸುದ್ದಿ ಪರಿಸರದಲ್ಲಿ ಹರಿದಾಡಿದೆ.
ಡಿ.ಆರ್.ಎಫ್. ಜೀತೇಶ್ ಅವರ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಭಾಸ್ಕರ್, ರೇಖ, ಜೈರಾಂ ಅವರು ಚಿರತೆ ಕಂಡುಬಂದಿದೆ ಎನ್ನಲಾದ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ.