ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಭಾಗದಲ್ಲಿ ಮತ್ತೆ ಚಿರತೆ ಹಾವಳಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ
ಒಂದೆಡೆ ಕಾರ್ಕಳ ಸಮೀಪದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಹೆಬ್ರಿಯಲ್ಲಿ ಹಾಡಹಗಲೇ ಗದ್ದೆಯಲ್ಲಿ ಮೇಯುತ್ತಿದ್ದ ಕರು ಮೇಲೆ ಅದು ದಾಳಿ ನಡೆಸಿದೆ. ಎರಡು ಘಟನೆಗಳು ಈ ಭಾಗದ ನಾಗರಿಕರನ್ನು ಆತಂಕಕ್ಕೆ ತಳ್ಳಿದ್ದು, ಅರಣ್ಯ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ರಸ್ತೆ ದಾಟಿದ ಚಿರತೆ
ಎರಡು ದಿನಗಳ ಹಿಂದೆ ರಾತ್ರಿ ಸುಮಾರು 8 ಗಂಟೆ ವೇಳೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಿಲಿಕಲ್ಲು ಸಮೀಪದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಾರ್ಕಳ ಪಟ್ಟಣದಿಂದ ಮನೆಗೆ ಹಿಂದಿರುಗುತ್ತಿದ್ದ ಸ್ಥಳೀಯ ನಿವಾಸಿಯೊಬ್ಬರು ರಸ್ತೆ ದಾಟುತ್ತಿದ್ದ ಚಿರತೆಯನ್ನು ಗಮನಿಸಿ, ತಮ್ಮ ಮೊಬೈಲ್ನಲ್ಲಿ ಅದರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಚಿರತೆ ಕಂಡುಬಂದ ಸ್ಥಳದ ಸಮೀಪವೇ ಶಿಕ್ಷಣ ಸಂಸ್ಥೆಯೊಂದು ಇರುವುದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಇದರ ಬೆನ್ನಿಗೇ ಹೆಬ್ರಿಯ ಸೀತಾನದಿ ನೇಚರ್ ಕ್ಯಾಂಪ್ ಸಮೀಪ ಗದ್ದೆಯಲ್ಲಿ ಮೇಯುತ್ತಿದ್ದ ಕರು ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಕರುವಿನ ಕುತ್ತಿಗೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ ಚಿರತೆ, ಇತರೆ ದನಗಳು ಒಟ್ಟಾಗಿ ಅಲ್ಲಿಗೆ ಧಾವಿಸುತ್ತಿದ್ದಂತೆ ಕಾಡಿನತ್ತ ಪರಾರಿಯಾಗಿದೆ. ಗಾಯಗೊಂಡ ಕರುವಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಸ್ಥಳೀಯರ ಪ್ರಕಾರ, ಹೆಬ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚಿರತೆಗಳ ಓಡಾಟ ಹೆಚ್ಚಾಗಿದೆ. ಈ ಹಿಂದೆ ಹಲವು ನಾಯಿಗಳು, ಕರುಗಳು ಹಾಗೂ ಇತರ ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿರುವ ಘಟನೆಗಳು ವರದಿಯಾಗಿವೆ.



