ಹೊಸದಿಗಂತ ವರದಿ ಶಿವಮೊಗ್ಗ:
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ರಾಜ್ಯ ಸರ್ಕಾರ ಹುಟ್ಟು ಹಾಕಿರುವ ಗೊಂದಲವನ್ನು ತಕ್ಷಣ ನಿವಾರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಪರವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಡ-ಬಲದಲ್ಲಿ ಇರುವ ಕೆಲ ಎಡಪಂಥೀಯ ಚಿಂತಕರು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ತಪ್ಪು ಕಲ್ಪನೆಗಳನ್ನು ತುಂಬಿದ್ದಾರೆ. ಇದನ್ನೇ ಆಧರಿಸಿ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಜಾಗತಿಕ ಮಟ್ಟಕ್ಕೆ ನಮ್ಮ ಮಕ್ಕಳನ್ನು ಸಿದ್ಧಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯವಿದೆ. ಆದರೆ ಕೇವಲ ರಾಜಕೀಯ ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ನಿಲುವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಾಳಿದೆ ಎಂದು ದೂರಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವಾಗ ಸತತವಾಗಿ ಸಾರ್ವಜನಿಕ ಚರ್ಚೆಗಳು ನಡೆದಿವೆ. ಆದರೆ ಎಸ್ಇಪಿ ಜಾರಿಗೆ ಎಷ್ಟು ಕಡೆ ಚರ್ಚೆ ಮಾಡಿದ್ದಾರೆ ? ಯುಜಿಸಿ ಉನ್ನತ ಶಿಕ್ಷಣಕ್ಕೆ ಇರುವ ದೊಡ್ಡ ಸಂಸ್ಥೆ. ಅವರ ಬಳಿ ಚರ್ಚೆಯೇ ಮಾಡಿಲ್ಲ. ಅವರ ಬಳಿ ಅನುದಾನ ಕೇಳುವುದು ಹೇಗೆ? ಎಸ್ಇಪಿ ಎಂಬುದು ಓಲ್ಡ್ ವೈನ್ ಇನ್ ನ್ಯೂ ಬಾಟಲ್ ತರ ಆಗಿದೆ. ಹಾಗಾಗಿ ತಕ್ಷಣ ಗೊಂದಲ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಎ.ಜೆ.ರಾಮಚಂದ್ರ, ಧರ್ಮಪ್ರಸಾದ್, ಚಂದ್ರಶೇಖರ್, ಡಾ.ರವಿಕಿರಣ್, ರಾಮಲಿಂಗಪ್ಪ, ಎಬಿವಿಪಿಯ ಪ್ರವೀಣ್ ಇದ್ದರು.