ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಇತ್ತೀಚೆಗಷ್ಟೆ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದಾರೆ.
ಇದರ ನಡುವೆ ನೋವಿನ ಸ್ಥಿತಿಯಲ್ಲಿಯೂ ಕರ್ತವ್ಯ ಮರೆಯದ ವಿಜಯ್ ರಾಘವೇಂದ್ರ ತಮ್ಮ ‘ಕದ್ದ ಚಿತ್ರ’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದು, ಈ ವೇಳೆ ಮಾಧ್ಯಮಗಳ ವಿಶೇಷ ಸಂದರ್ಶನದಲ್ಲಿ ಪತ್ನಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಪ್ರತಿದಿನ ಎದ್ದಾಗಲೂ ಒಂದು ಎಚ್ಚರಿಕೆ ಇರುತ್ತಿತ್ತು, ನನ್ನ ಕುಟುಂಬಕ್ಕಾಗಿ ನಾನು ಕೆಲಸ ಮಾಡಬೇಕು, ಅವರಿಗೆ ಜೀವನದಲ್ಲಿ ಕಷ್ಟ ನೀಡಬಾರದು , ನನಗೆ ಏನೂ ಆಗದಂತೆ ನೋಡಿಕೊಳ್ಳಬೇಕು, ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು. ಆದರೆ ಈಗ ಅರ್ಥ ಕಳೆದುಕೊಂಡಂತೆ ಜೀವನ ಅನ್ನಿಸುತ್ತಿದೆ ಎಂದು ವಿಜಯ್ ರಾಘವೇಂದ್ರ ಕಣ್ಣೀರಿಟ್ಟಿದ್ದಾರೆ. .
ನನ್ನ ಜೀವನದ ನಗು, ಶಕ್ತಿ, ಸ್ಪೂರ್ತಿ ಎಲ್ಲವೂ ಸ್ಪಂದನಾ ಆಗಿದ್ದಳು. ಹದಿನಾರು ವರ್ಷದ ಹಿಂದೆ ನಾನು ಬೇರೆಯದ್ದೇ ಆಗಿದ್ದೆ. ಆದರೆ ಸ್ಪಂದನಾ ಬಾಳಿಗೆ ಬಂದ ಬಳಿಕ ನಾನು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಯ್ತು. ಕಳೆದ ಎರಡು ವರ್ಷಗಳಿಂದ ಅಂತೂ ಅವಳು ನನ್ನನ್ನು ನೋಡಿಕೊಂಡ ರೀತಿಯೇ ಬೇರೆ ಥರಹದಲ್ಲಿತ್ತು. ಯಾವುದಕ್ಕೋ ನನ್ನನ್ನು ಅಣಿಗೊಳಿಸುತ್ತಿದ್ದಳೇನೋ ಎಂದು ಈಗ ಅನ್ನಿಸುತ್ತಿದೆ. ಸದಾ ಬ್ಯುಸಿಯಾಗಿರುತ್ತಿದ್ದಳು, ನಾನೂ ಸಹ ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದಳು. ಧೈರ್ಯ ತುಂಬುತ್ತಿದ್ದಳು, ಅವಳೂ ಸಹ ಸಿನಿಮಾ ವಿಷಯಗಳಲ್ಲಿ ಹೆಚ್ಚು ಸಕ್ರಿಯವಾಗತೊಡಗಿದ್ದಳು.
ಆದ್ರೆ ಈಗ ಎಲ್ಲವೂ ಬದಲಾಗಿದೆ.ನನ್ನ ಕರ್ತವ್ಯವನ್ನು ನಾನು ಮುಂದುವರೆಸಬೇಕಿದೆ. ಮಗನಿಗಾಗಿ, ಅವನ ಮೇಲೆ ಸ್ಪಂದನಾ ಇಟ್ಟಿದ್ದ ಕನಸುಗಳನ್ನು ಈಡೇರಿಸಲು ಕೆಲಸ ಮಾಡಬೇಕಿದೆ. ಅವಳು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಳು, ನನ್ನ ತಾಯಿಗೆ ತಾಯಿಯಾಗಿದ್ದಳು. ನನ್ನ ಅಮ್ಮನಿಗೆ ಆರೋಗ್ಯ ಸರಿಯಿಲ್ಲ. ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ನನ್ನ ತಂದೆಯೂ ಸಹ, ಆಕೆಯನ್ನು ಬಹಳ ಹಚ್ಚಿಕೊಂಡಿದ್ದರು.ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.