ಕೆಲವೊಮ್ಮೆ ನಿಜವಾದ ಸಮಸ್ಯೆಗಿಂತ, ಅದರ ಬಗ್ಗೆ ನಾವು ಮಾಡುವ ಯೋಚನೆಯೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ. ಒಂದು ಸಣ್ಣ ಘಟನೆ ನಡೆದರೂ, ಮನಸ್ಸು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತದೆ. ಇನ್ನೂ ಆಗದ ವಿಷಯಗಳ ಬಗ್ಗೆ ಚಿಂತಿಸುತ್ತದೆ. ಯಾರೋ ಹೇಳಿದ ಒಂದು ಮಾತಿಗೆ ಹತ್ತು ಅರ್ಥ ಹುಡುಕುತ್ತದೆ. ಕೊನೆಗೆ ನಡೆದದ್ದಕ್ಕಿಂತ, ನಡೆಯಬಹುದು ಅನ್ನೋ ಭಯವೇ ನಮ್ಮನ್ನು ಹೆಚ್ಚು ದಣಿಸುತ್ತದೆ.
ವಿಚಿತ್ರ ಅಂದ್ರೆ, ಹೆಚ್ಚು ಯೋಚನೆ ಮಾಡೋದರಿಂದ ಎಲ್ಲ ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ. ಬದಲಾಗಿ, ಇಲ್ಲದ ಸಮಸ್ಯೆಗಳನ್ನೂ ಮನಸ್ಸು ಸೃಷ್ಟಿಸಿಕೊಳ್ಳಲು ಶುರು ಮಾಡುತ್ತದೆ. ಒಂದು ನಿರ್ಧಾರ ತೆಗೆದುಕೊಳ್ಳಬೇಕಾದಾಗ, “ಹೀಗಾದ್ರೆ ಏನು?”, “ಅದಾದ್ರೆ ಏನು?” ಅನ್ನೋ ಪ್ರಶ್ನೆಗಳಲ್ಲೇ ಸಿಲುಕಿಕೊಂಡು ಮುಂದೆ ಸಾಗೋದು ಕಷ್ಟವಾಗುತ್ತದೆ.
ಇದನ್ನೂ ಓದಿ:
ಹೆಚ್ಚು ಯೋಚನೆ ಮಾಡುವವರು ಸಾಮಾನ್ಯವಾಗಿ ಹೆಚ್ಚು ಕಾಳಜಿ ಇರುವವರೇ ಆಗಿರುತ್ತಾರೆ. ಆದರೆ ಪ್ರತಿಯೊಂದು ವಿಷಯವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಅನ್ನೋದನ್ನ ಒಪ್ಪಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಕೆಲವು ಪ್ರಶ್ನೆಗಳಿಗೆ ಸಮಯವೇ ಉತ್ತರ ಕೊಡುತ್ತದೆ. ಕೆಲವು ವಿಷಯಗಳನ್ನು ಅನುಭವಿಸಬೇಕು, ಅರ್ಥ ಮಾಡಿಕೊಳ್ಳಬೇಕು… ಯೋಚನೆ ಮಾಡುತ್ತಾ ಮಾತ್ರ ಬದುಕಲು ಸಾಧ್ಯವಿಲ್ಲ.
ಜೀವನದಲ್ಲಿ ಪ್ರತಿಯೊಂದಕ್ಕೂ ವಿವರಣೆ ಸಿಗೋದಿಲ್ಲ. ಕೆಲವೊಮ್ಮೆ ಮನಸ್ಸನ್ನು ಸ್ವಲ್ಪ ಶಾಂತಗೊಳಿಸಿ, ವಿಷಯಗಳನ್ನು ಅವು ಇರುವಂತೆಯೇ ಸ್ವೀಕರಿಸಬೇಕಾಗುತ್ತದೆ. ಯಾಕೆಂದರೆ ನಮ್ಮ ಜೀವನದ ಅರ್ಧ ಸಮಸ್ಯೆಗಳು ಹೊರಗಿನಿಂದ ಬರೋದಿಲ್ಲ…ನಮ್ಮ ಮನಸ್ಸಿನೊಳಗೇ ಹುಟ್ಟಿಕೊಳ್ಳುತ್ತವೆ.



